ಮುಂಬೈ: ವಾಟ್ಸಪ್ ಪೋಸ್ಟ್ ನೋಡಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯೊಬ್ಬನನ್ನು ಸ್ನೇಹಿತ ಬುದುಕಿಸಿರುವ ಘಟನೆ ಮುಂಬೈನ ಉಪನಗರವಾದ ಸಾಕಿನಾಕಾದಲ್ಲಿ ನಡೆದಿದೆ.
ಸಾಕಿನಾಕಿ ನಿವಾಸಿಯೊಬ್ಬ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಾರ ಮಾಡಿ ಸೂಸೈಡ್ ಸಂದೇಶಗಳನ್ನು ವಾಟ್ಸಪ್ ಗ್ರೂಪ್ಗೆ ಪೋಸ್ಟ್ ಮಾಡಿದ್ದಾನೆ. ಅದೇ ಗ್ರೂಪ್ನಲ್ಲಿದ್ದ ಸ್ನೇಹಿತನೊಬ್ಬ ಅದನ್ನು ಗಮನಿಸಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಅವನನ್ನು ಕಾಪಾಡಿದ್ದಾರೆ.
ಆಗಿದ್ದೇನು?
27 ವರ್ಷದ ವ್ಯಕ್ತಿಯೊಬ್ಬ ಫೋಟೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದನು. ಕೆಲವು ತಿಂಗಳ ಹಿಂದೆ ಜಗಳವಾಡಿಕೊಂಡು ಹೆಂಡತಿ ಮನೆ ಬಿಟ್ಟು ಹೋಗಿದ್ದಳು. ನಂತರ ಈತ ಖಿನ್ನತೆಗೆ ಒಳಗಾಗಿದ್ದು, ಅಪ್ಪ-ಅಮ್ಮನ ಜೊತೆ ವಾಸಿಸುತ್ತಿದ್ದನು. ಪತ್ನಿ ತನ್ನನ್ನು ಬಿಟ್ಟು ಹೋಗಿದ್ದಕ್ಕೆ ಮನನೊಂದು ಆತ್ಮಹತ್ಯೆ ಮೆಸೇಜ್ ವಾಟ್ಸಪ್ ನಲ್ಲಿ ಸೆಂಡ್ ಮಾಡಿದ್ದ.
ಈ ಮಸೇಜ್ ನೋಡಿ ತಕ್ಷಣ ಸ್ನೇಹಿತ ಪೊಲೀಸರಿಗೆ ತಿಳಿಸಿದ್ದ. ಪೊಲೀಸರು ಸ್ನೇಹಿತನಿಂದ ಮಾಹಿತಿ ತಿಳಿದು ತಕ್ಷಣ ಆತನ ಮನೆಗೆ ಹೋಗಿದ್ದಾರೆ. ಪೋಷಕರು ಗ್ರೌಂಡ್ ಫ್ಲೋರ್ನಲ್ಲಿ ವಾಸಿಸುತ್ತಿದ್ದರು. ಆದರೆ ಮಗ ಕಾಣಲಿಲ್ಲ ನಂತರ ಅವನು 2ನೇ ಮಹಡಿಯಲ್ಲಿ ಇರುವುದನ್ನು ತಿಳಿದು ಅಲ್ಲಿಗೆ ಓಡಿ ಹೋಗಿದ್ದಾರೆ. ಆದರೆ ಅವನು ಬಾಗಿಲನ್ನು ಒಳಗಡೆಯಿಂದ ಲಾಕ್ ಮಾಡಿಕೊಂಡಿದ್ದ. ನಂತರ ಪೊಲೀಸರು ಮೇಲ್ಛಾವಣಿಯಿಂದ ಹೋಗುವುದಕ್ಕೆ ಪ್ರಯತ್ನಿಸಿದರು. ಆದರೆ ಅದು ಸಾಧ್ಯವಾಗಿಲ್ಲ. ಕೊನೆಗೆ ಪೊಲೀಸರು ಕಿಟಕಿಯಿಂದ ನೋಡಿ ನಿನ್ನ ಜೊತೆ 15 ನಿಮಿಷ ಮಾತನಾಡಬೇಕು ಎಂದು ಮನವೊಲಿಸಿ ಬಾಗಿಲು ತೆಗೆಯುವ ರೀತಿ ಮಾಡಿ ಅವನನ್ನು ಕಾಪಾಡಿದ್ದಾರೆ.
ವ್ಯಕ್ತಿಯನ್ನು ಕಾಪಾಡಿದ ನಂತರ ಅವನನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿ ಕೌನ್ಸ್ಲಿಂಗ್ ಕೊಡಿಸಿದೆವು. ಈಗ ಆತ ಸಹಜ ಸ್ಥಿತಿಯಲ್ಲಿದ್ದಾನೆ ಎಂದು ಸಕಿನಾಕಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದರು.