ಮುಂಬೈ: ನನಗೆ ಒಂಟಿ ಜೀವನದಿಂದ ಮುಕ್ತಿ ಬೇಕೆಂದು ಸಮುದ್ರಕ್ಕೆ ಹಾರಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಆಶೋರ್ ಜುಹು ಚೌಪಟ್ಟಿ ಯಲ್ಲಿ ನಡೆದಿದೆ.
29 ವರ್ಷದ ಅಜಿತ್ ದುಕ್ರೆ ಆತ್ಮಹತ್ಯೆಗೆ ಶರಣಾದ ಎಂಬಿಎ ಪದವಿಧರ. ಅಜಿತ್ ಗುರುವಾರ ಘಟಕ್ಪುರನ ತಮ್ಮ ಮನೆಯಿಂದ ನಾಪತ್ತೆಯಾಗಿದ್ರು. ಈ ಸಂಬಂಧ ಅಜಿತ್ ಸಹೋದರ ಅನಿಲ್ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.
ಪುಣೆ ಮೂಲದ ಅಜಿತ್ ಘಟಕ್ಪುರ ನಲ್ಲಿ ಅಣ್ಣನೊಂದಿಗೆ ವಾಸವಾಗಿದ್ದರು. ಅಜಿತ್ ಹಣಕಾಸಿನ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, ತಿಂಗಳಿಗೆ 80 ಸಾವಿರ ರೂ. ಸಂಬಳ ಪಡೆಯುತ್ತಿದ್ದರು.
ಗುರುವಾರ ರಾತ್ರಿ ಸಂತಾಕ್ರೂಜ್ ಬಳಿಯ ಆಶೋರ್ ಜುಹು ಚೌಪಟ್ಟಿಯಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಮೃತ ದೇಹವನ್ನು ಪರೀಶಿಲಿಸಿದಾಗ, ಫಸ್ಟ್ ಕ್ಲಾಸ್ ರೈಲ್ವೇ ಟಿಕೆಟ್ ಸಿಕ್ಕಿದೆ. ಟಿಕೆಟ್ ಆಧರಿಸಿ ತನಿಖೆ ಆರಂಭಿಸಿದ ಪೊಲೀಸರಿಗೆ ಶವ ಅಜಿತ್ನಂದು ತಿಳಿದಿದೆ. ಪೊಲೀಸರಿಂದ ವಿಷಯ ತಿಳಿದ ಅಜಿತ್ ಸಹೋದರ ಅನಿಲ್ ಸ್ಥಳಕ್ಕಾಗಮಿಸಿ ಮೃತದೇಹ ಗುರುತಿಸಿದ್ದಾರೆ. ಪೊಲೀಸರು ಸಾವಿಗೆ ನಿಖರ ಕಾರಣ ತಿಳಿಯಲು ತನಿಖೆಯನ್ನು ಚುರುಕುಗೊಳಿಸಿದಾಗ ಅಜಿತ್ ಕೋಣೆಯಲ್ಲಿ ಡೆತ್ ನೋಟ್ ಸಿಕ್ಕಿದೆ.
ಏನಿತ್ತು ಡೆತ್ ನೋಟ್ನಲ್ಲಿ?: ಅಜಿತ್ ಡೆತ್ನೋಟ್ ನಲ್ಲಿ ತನ್ನ ಜೀವನ ಶೈಲಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ನಾನು ಚಿಕ್ಕಂದಿನಿಂದಲೂ ಪುಸ್ತಕದ ಹುಳು ಆಗಿದ್ದೆ. ಹಾಗಾಗಿ ಸಮಾಜದಲ್ಲಿನ ಯಾರೊಂದಿಗೆ ಬೆರೆಯುತ್ತಿರಲಿಲ್ಲ. ಸಮಾಜದಲ್ಲಿ ವ್ಯವಹರಿಸುವ ಕನಿಷ್ಠ ಜ್ಞಾನವು ನನ್ನಲ್ಲಿ ಇರಲಿಲ್ಲ. ನನ್ನನ್ನು ಸದಾ ಒಂಟಿತನ ಕಾಡುತ್ತಿತ್ತು. ನನಗೆ ಉಂಟಾಗಿರುವ ನೋವಿಗೆ ಕೊನೆ ಹಾಡಲು ನನ್ನ ಜೀವನಕ್ಕೆ ವಿದಾಯ ಹೇಳುತ್ತಿದ್ದೇನೆ. ನಾನು ಜಲ ಸಮಾಧಿ ಆಗುತ್ತಿದ್ದೇನೆ ಎಂದು ಬರೆಯಲಾಗಿತ್ತು.
ಅಜಿತ್ ಜೀವನದಲ್ಲಿ ಏಕಾಂಗಿತನ, ಮಾನಸಿಕ ಖಿನ್ನತೆ ಯಾವುದೇ ನಮಗೆ ಕಂಡು ಬಂದಿಲ್ಲ. ಅಜಿತ್ ಬಾಲ್ಯದಿಂದಲೂ ಏಕಾಂಗಿಯಾಗಿ ಇರಲು ಇಷ್ಟಪಡುತ್ತಿದ್ದನು. ಆದರೆ ಅಜಿತ್ ಈ ರೀತಿಯಾಗಿ ದೊಡ್ಡ ಹೆಜ್ಜೆ ಇಡುತ್ತಾನೆ ಅಂತಾ ನಾವು ಕನಸಿನಲ್ಲಿಯೂ ಊಹಿಸಿರಲಿಲ್ಲ ಎಂದು ಅಜಿತ್ ಸಂಬಂಧಿ ಶರದ್ ದೊಕ್ರೆ ಹೇಳುತ್ತಾರೆ.
ಮರಣೋತ್ತರ ಶವ ಪರೀಕ್ಷೆಯ ನಂತರ ಅಜಿತ್ ಮೃತ ದೇಹವನ್ನು ಅನಿಲ್ ವಶಕ್ಕೆ ನೀಡಲಾಗಿದೆ. ಅಜಿತ್ ಶವವನ್ನು ಪುಣೆ ಜಿಲ್ಲೆಯ ಜುನ್ನರ್ ಗ್ರಾಮಕ್ಕೆ ತೆಗೆದುಕೊಂಡು ಹೋಗಿ ಅಂತಿಮ ವಿಧಿ ವಿಧಾನಗಳನ್ನು ಮಾಡಲಾಗಿದೆ. ನಾವು ತನಿಖೆಯನ್ನು ಮುಂದುವರೆಸಿದ್ದು, ಜುಹು ಬೀಚ್ನಲ್ಲಿಯ ಸಿಸಿಟಿವಿ ಫೋಟೇಜ್ ಪರಿಶೀಲನೆ ನಡೆಸಲಾಗುತ್ತಿದೆ. ಸಿಸಿಟಿವಿ ದೃಶ್ಯಾವಳಿಗಳಿಂದ ಅಜಿತ್ ಆತ್ಮಹತ್ಯೆ ಮಾಡಿಕೊಳ್ಳುವ ವೇಳೆ ಸ್ಥಳದಲ್ಲಿ ಜನರು ಮತ್ತು ಬೀಚ್ನಲ್ಲಿ ಆತನ ಚಲನವಲನ ಗಮನಿಸಲಾಗುವುದು ಎಂದು ಸಂತಕ್ರೂಜ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಶಾಂತನು ಪವಾರ್ ತಿಳಿಸಿದ್ದಾರೆ.