ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿದ್ದು, ತೃಣಮೂಲ ಕಾಂಗ್ರೆಸ್ (ಟಿಎಂಸಿ), ಕಾಂಗ್ರೆಸ್ ಹಾಗೂ ಸಿಪಿಎಂ ಪಕ್ಷಗಳಿಂದ 107 ಶಾಸಕರು ಬಿಜೆಪಿಗೆ ಸೇರಲಿದ್ದಾರೆ ಎಂಬ ಹೇಳಿಕೆಯನ್ನು ಬಿಜೆಪಿ ನಾಯಕ ಮುಕುಲ್ ರಾಯ್ ನೀಡಿದ್ದಾರೆ.
ಕೋಲ್ಕತ್ತಾದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಸಿಕ್ಕ ಭಾರೀ ಬಹುಮತದ ಪರಿಣಾಮ ಪಶ್ಚಿಮ ಬಂಗಾಳದ ಅನೇಕ ಮುಖಂಡರು ಬಿಜೆಪಿ ಸೇರಲು ಬಯಸುತ್ತಿದ್ದಾರೆ. ಅಂತಹ ಶಾಸಕರ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಅವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ ಎಂದು ತಿಳಿಸಿದ್ದಾರೆ.
Mukul Roy, BJP in Kolkata: 107 West Bengal MLAs from CPM, Congress and TMC will join BJP. We have their list prepared and they are in contact with us pic.twitter.com/SJ48v5WHMW
— ANI (@ANI) July 13, 2019
ಕಳೆದ ತಿಂಗಳು ಹಿಂದಷ್ಟೇ ಟಿಎಂಸಿಯ ಇಬ್ಬರು ಶಾಸಕರಾದ ಸುನಿಲ್ ಸಿಂಗ್ ಮತ್ತು ಬಿಸ್ವಾಜಿತ್ ದಾಸ್ ಬಿಜೆಪಿ ಸೇರಿದ್ದರು. ಮೇ 28ರಂದು ಟಿಎಂಸಿಯ 50ರಿಂದ 60 ಕೌನ್ಸಿಲರ್ ಗಳು, ಇಬ್ಬರು ಹಾಗೂ ಸಿಪಿಎಂನ ಓರ್ವ ಶಾಸಕ ಬಿಜೆಪಿಗೆ ಸೇರ್ಪಡೆಯಾಗಿದ್ದರು.
ನವದೆಹಲಿಯಲ್ಲಿ ಜೂನ್ 18ರಂದು ತೃಣಮೂಲ ಕಾಂಗ್ರೆಸ್ನ ಶಾಸಕ ಸುನೀಲ್ ಸಿಂಗ್ ಹಾಗೂ 15 ಕೌನ್ಸಿಲರ್ ಗಳು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಬಿಜೆಪಿಯ ಪಶ್ಚಿಮ ಬಂಗಾಳ ಉಸ್ತುವಾರಿ ಕೈಲಾಶ್ ವಿಜಯವರ್ಗೀ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ್ದ ಕೈಲಾಶ್ ವಿಜಯವರ್ಗೀ ಅವರು, ನಮ್ಮ ಸಂಪರ್ಕದಲ್ಲಿ ಇನ್ನೂ ಕೆಲವು ಶಾಸಕರು ನಮ್ಮ ಸಂಪರ್ಕದಲ್ಲಿ ಇದ್ದಾರೆ ಎಂದು ಹೇಳಿದ್ದರು.
ಈ ಬೆಳವಣಿಗೆ ಬೆನ್ನಲ್ಲೇ ಕೋಲ್ಕತ್ತಾದಲ್ಲಿ ನಡೆದ ಟಿಎಂಸಿ ಕೌನ್ಸಿಲರ್ ಗಳ ಸಭೆಯಲ್ಲಿ ಮಾತನಾಡಿದ್ದ ಟಿಎಂಸಿ ನಾಯಕಿ, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರು, ತೃಣಮೂಲ ಕಾಂಗ್ರೆಸ್ (ಟಿಎಂಸಿ) ದುರ್ಬಲ ಪಕ್ಷವಲ್ಲ. ಒಬ್ಬರು ಪಕ್ಷ ಬಿಟ್ಟು ಹೋದರೆ 500 ಜನ ಸೇರ್ಪಡೆಯಾಗುತ್ತಾರೆ. ಹಣದ ಆಸೆಗಾಗಿ 15ರಿಂದ 20 ಕೌನ್ಸಿಲರ್ ಗಳು ಪಕ್ಷ ತೊರೆದರೆ ನಾನು ಹೆದರುವುದಿಲ್ಲ. ಶಾಸಕರು ಪಕ್ಷವನ್ನು ಬಿಟ್ಟು ಹೋಗಲು ಇಚ್ಛಿಸಿದರೆ ಬಿಟ್ಟು ಹೋಗಲಿ. ಪಕ್ಷದಲ್ಲಿ ಕಳ್ಳರನ್ನು ಇಟ್ಟುಕೊಳ್ಳಲು ನಾವು ಬಯಸುವುದಿಲ್ಲ ಎಂದು ಗುಡುಗಿದ್ದರು.