ಬೆಂಗಳೂರು: ಸುಪ್ರೀಂಕೋರ್ಟ್ ಅಂಗಳದಲ್ಲಿ ಪ್ರಕರಣ ಇರುವುದರಿಂದ ನೀವು ಯಾವುದಕ್ಕೂ ಭಯಪಡಬೇಕಾದ ಅಗತ್ಯವಿಲ್ಲ ಎಂದು ಹಿರಿಯ ವಕೀಲ ಮುಕುಲ್ ರೋಹ್ಟಗಿ, ಅತೃಪ್ತ ಶಾಸಕರಿಗೆ ಅಭಯ ನೀಡಿದ್ದಾರೆ.
ಕಾಂಗ್ರೆಸ್ ಜುಲೈ 11ರಂದು ಕೊಟ್ಟಿರುವ ವಿಪ್ ನಿಮಗೆ ಅನ್ವಯ ಆಗುದಿಲ್ಲ. ಅಷ್ಟೇ ಅಲ್ಲದೆ ಮಂಗಳವಾರದವರೆಗೂ ಸ್ಪೀಕರ್ ಕ್ರಮಕೈಗೊಳ್ಳಲು ಬರುವುದಿಲ್ಲ. ಸುಪ್ರೀಂಕೋರ್ಟ್ ಆದೇಶ ಕೇವಲ ಅನರ್ಹತೆ ಬಗ್ಗೆ ಮಾತ್ರ ಸಿಮೀತವಾಗಿರಲ್ಲ ಎಂದು ರೋಹ್ಟಗಿ ಅವರು, ಪತ್ರ ಬರೆದು ವಕೀಲರ ಮೂಲಕ ರೆಬಲ್ ಶಾಸಕರಿಗೆ ತಲುಪಿಸಿದ್ದಾರೆಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಪ್ರಕರಣದ ಕುರಿತು ಸುಪ್ರೀಂಕೋರ್ಟ್ ಶುಕ್ರವಾರ ವಿಚಾರಣೆ ನಡೆಸಿ, ಮಧ್ಯಂತರ ಆದೇಶ ನೀಡಿದೆ. ಈ ಮೂಲಕ ಮಂಗಳವಾರದವರೆಗೂ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಸೂಚನೆ ನೀಡಲಾಗಿದೆ. ಹೀಗಾಗಿ ನೀವು ಅನರ್ಹತೆ ಭಯದಿಂದ ಇರುವುದು ಅಗತ್ಯವಿಲ್ಲ. ವಿಪ್ ನೀಡಿರುವ ಬಗ್ಗೆ ವಿಚಾರಣೆ ವೇಳೆ ಉಲ್ಲೇಖಿಸಿದ್ದೇನೆ. ವಿಪ್ ಉಲ್ಲಂಘನೆ ಬಗ್ಗೆಯೂ ಭಯ ಪಡಬೇಕಿಲ್ಲ. ಅನರ್ಹತೆ ನಿರ್ದಿಷ್ಟ ವಿಚಾರದ ಕುರಿತು ವಿಚಾರಣೆ ನಡೆಯುತ್ತಿಲ್ಲ ಅಂತ ರೋಹ್ಟಗಿ ತಿಳಿಸಿದ್ದಾರೆ ಎಂದು ಕೇಳಿಬಂದಿದೆ.
ಅತೃಪ್ತ ಶಾಸಕರು ರಾಜೀನಾಮೆ ವಾಪಸ್ ಪಡೆಯುವ ಭಯದಲ್ಲಿ ಬಿಜೆಪಿ ನಾಯಕರು ಇದ್ದಾರೆ. ಹೀಗಾಗಿ ಹಿರಿಯ ವಕೀಲ ಮುಕುಲ್ ರೋಹ್ಟಗಿ ಅವರ ಮೂಲಕ ರೆಬಲ್ ಶಾಸಕರಿಗೆ ಧೈರ್ಯ ತುಂಬುವ ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿಯವರು ರೊಹ್ಟಗಿ ಅಸ್ತ್ರವನ್ನು ಪ್ರಯೋಗಿಸಿ ಶಾಸಕರನ್ನು ಹಿಡಿದಿಟ್ಟುಕೊಳ್ಳುತ್ತಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.