– ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ತನಿಖೆಗೆ ಆಗ್ರಹ
ಬೆಂಗಳೂರು: ಮುಡಾ ಕೇಸಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಲೋಕಾಯುಕ್ತ ಎಫ್ಐಆರ್ ಬೆನ್ನಲ್ಲೇ ಈಗ ED (ಜಾರಿ ನಿರ್ದೇಶನಾಲಯ) ಭೀತಿ ಎದುರಾಗಿದೆ. 59 ಕೋಟಿ ರೂ. ಮೌಲ್ಯದ 14 ಸೈಟುಗಳ ಹಗರಣದಲ್ಲಿ ತನಿಖೆ ನಡೆಸಬೇಕು ಅಂತ ಜಾರಿ ನಿರ್ದೇಶನಾಲಯಕ್ಕೆ ಇ-ಮೇಲ್ ಮೂಲಕ ಆರ್ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ (Snehamayi Krishna) ದೂರು ನೀಡಿದ್ದಾರೆ.
ಬೆಂಗಳೂರಿನ ಇಡಿ ಜಂಟಿ ನಿರ್ದೇಶಕರಿಗೆ 16 ಪುಟಗಳ ದೂರಿನ ಅರ್ಜಿ ಬರೆದು ಇ-ಮೇಲ್ ಮೂಲಕ ಕಳಿಸಿರುವ ಸ್ನೇಹಮಹಿ ಕೃಷ್ಣ, ಸಿದ್ದರಾಮಯ್ಯ ವಿರುದ್ಧ ಅಕ್ರಮ ಹಣ ವರ್ಗಾವಣೆ ಕಾಯ್ಡೆ (Money Laundering Act) ಅಡಿಯಲ್ಲಿ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ಮುಡಾದಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ. ಸಿಎಂ ಸಿದ್ದರಾಮಯ್ಯ ಅಧಿಕಾರ ದುರ್ಬಳಕೆ ಮಾಡಿಕೊಂಡು ಮುಡಾದಲ್ಲಿ ಪತ್ನಿಯ ಹೆಸರಿನಲ್ಲಿ 14 ನಿವೇಶನ ಪಡೆದಿದ್ದಾರೆ ಎಂದು ಸಹ ದೂರರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಮುಡಾ ಹಗರಣ ತನಿಖೆಗೆ 4 ತಂಡ ರಚನೆ:
ಮುಡಾ ಹಗರಣದಲ್ಲಿ (MUDA Scam) ಸಿಎಂ ಸಿದ್ದರಾಮಯ್ಯ ಅವರೇ ಎ-1 ಆರೋಪಿಯಾಗಿದ್ದು, ತನಿಖೆಯ ಟೆನ್ಷನ್ ಶುರುವಾಗಿದೆ. ಶನಿವಾರ – ಭಾನುವಾರ ಲೋಕಾಯುಕ್ತ ಕಚೇರಿಗೆ ರಜೆ ಇರೋದ್ರಿಂದ ಸೋಮವಾರದಿಂದ ಅಧಿಕೃತ ತನಿಖೆ ಶುರುವಾಗಲಿದೆ. ಎಫ್ಐಆರ್ ಆದ ಬೆನ್ನಲ್ಲೇ ಲೋಕಾಯುಕ್ತ ಎಸ್ಪಿ ತನಿಖೆಗೆ 4 ತಂಡಗಳನ್ನು ರಚಿಸಿದ್ದಾರೆ. ಇದನ್ನೂ ಓದಿ: ನಾಲ್ವರು ವಿಕಲ ಚೇತನ ಹೆಣ್ಣು ಮಕ್ಕಳಿಗೆ ಸ್ವೀಟ್ನಲ್ಲಿ ವಿಷ ಕೊಟ್ಟು ತಾನೂ ಆತ್ಮಹತ್ಯೆ ಮಾಡಿಕೊಂಡ ತಂದೆ
3 ತಿಂಗಳೊಳಗೆ ಕೋರ್ಟ್ಗೆ ತನಿಖಾ ವರದಿ ಸಲ್ಲಿಸಬೇಕಿರೋದ್ರಿಂದ ತನಿಖೆ ಸ್ವಲ್ಪ ಚುರುಕಾಗಿಯೇ ನಡೆಯುತ್ತೆ ಎನ್ನಲಾಗ್ತಿದೆ. ಈ ಬೆಳವಣಿಗೆಗಳ ಬೆನ್ನಲ್ಲೇ ಸಿದ್ದರಾಮಯ್ಯ ಕಾನೂನು ಹೋರಾಟ ಆರಂಭಿಸಿದ್ದು ಮೈಸೂರಿನ ನಿವಾಸದಲ್ಲಿ ವಕೀಲರು, ಕಾನೂನು ಸಲಹೆಗಾರ ಪೊನ್ನಣ್ಣ ಹಾಗೇ ಸಚಿವ ಬೈರತಿ ಸುರೇಶ್ ಜೊತೆ ಚರ್ಚಿಸಿದ್ರು. ನನ್ನಿಂದ ಸಿಎಂಗೆ ಸಂಕಷ್ಟ ಬಂತು ಅನ್ನೋದ್ರಲ್ಲಿ ಅರ್ಥ ಇಲ್ಲ ಅಂತ ಬೈರತಿ ಸುರೇಶ್ ಹೇಳಿದ್ರು. ಇದನ್ನೂ ಓದಿ: ಅಧಿಕಾರಿಗಳು ಮತ್ತು ಮುಖಂಡರು ಲಂಚ ಕೇಳಿದರೆ ನನ್ನ ವಿಳಾಸಕ್ಕೆ ಪತ್ರ ಬರೆಯಿರಿ: ಡಿಕೆಶಿ
ದಾನದ ರೂಪದಲ್ಲಿ ಸಿಎಂ ಪತ್ನಿಗೆ 3.11 ಎಕರೆ ನೀಡಿದ್ದ ಸಿಎಂ ಬಾಮೈದ ಮೊದಲ ಪ್ರತಿಕ್ರಿಯೆ ಕೊಟ್ಟಿದ್ದಾರೆ. ನನ್ನ ಹೆಸರಿದ್ದರೆ ನಾನೇನು ಮಾಡಲಿ, ಎಲ್ಲವನ್ನೂ ದೊಡ್ಡವರು ಮಾತಾಡ್ತಾರೆ. ನಾನೇನು ಮಾತನಾಡಲ್ಲ ಅಂತ ಮಲ್ಲಿಕಾರ್ಜುನಸ್ವಾಮಿ ಜಾರಿಕೊಂಡ್ರು. ಅಲ್ಲದೇ, ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತಕ್ಕೆ ನೀಡಿರುವ ವಿಳಾಸದಲ್ಲಿ ವಾಸವೇ ಮಾಡ್ತಿಲ್ಲ ಅನ್ನೋದು ತಿಳಿದುಬಂದಿದೆ. ಸಚಿವ ಮಹದೇವಪ್ಪ ಪ್ರತಿಕ್ರಿಯಿಸಿ ಸಿದ್ದರಾಮಯ್ಯ ನಾಯಕತ್ವಕ್ಕೆ ಗಂಡಾಂತರ ತರಲು ಪಟ್ಟಭಧ್ರ ಹಿತಾಸಕ್ತಿಗಳು ಹೊರಟಿವೆ ಅಂತ ಕಿಡಿಕಾರಿದ್ರು.
ದೂರುದಾರ ಸ್ನೇಹಮಯಿ ಕೃಷ್ಣ ಮಾತಾಡಿ, ಸಿದ್ದರಾಮಯ್ಯ ಪತ್ನಿ ಹೆಸರಲ್ಲಿ ಎಫ್ಐಆರ್ ಮಾಡಿಸಿದ್ದು, ನನಗೆ ವೈಯಕ್ತಿಕವಾಗಿ ಬೇಸರವಿದೆ ಎಂದಿದ್ದಾರೆ, ಜೊತೆಗೆ ಲೋಕಾಯುಕ್ತ ತನಿಖೆ ಬೇಡ. ಸಿಬಿಐ ತನಿಖೆಯೇ ಆಗಲಿ ಅಂತ ಆಗ್ರಹಿಸಿದ್ದಾರೆ. ಈ ಮಧ್ಯೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶ `ಪೊಲಿಟಿಕಲ್ ಆರ್ಡರ್’ ಅಂತ ಟೀಕಿಸಿದ್ದ ಸಚಿವ ಜಮೀರ್ ವಿರುದ್ಧ ಎಜಿ ಶಶಿಕಿರಣ್ ಶೆಟ್ಟಿಗೆ ಟಿ.ಜೆ ಅಬ್ರಹಾಂ ದೂರು ನೀಡಿದ್ದಾರೆ. ಇದನ್ನೂ ಓದಿ: ನಾನು ರಾಜ್ಯಕ್ಕೆ ಸೇವೆ ಮಾಡ್ಬೇಕು ಅಂತ ದೊಡ್ಡ ಹೋರಾಟ ಆಗ್ತಿದೆ; ಮತ್ತೆ ಸಿಎಂ ಆಸೆ ವ್ಯಕ್ತಪಡಿಸಿದ ಡಿಕೆಶಿ