ಮೈಸೂರು: ಮುಡಾ ಪ್ರಕರಣದಲ್ಲಿ (MUDA Case) ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧದ ಆದೇಶವನ್ನು ರಾಜಕೀಯ ತೀರ್ಪು ಎಂದು ಬಣ್ಣಿಸಿ ವಸತಿ ಸಚಿವ ಜಮೀರ್ ಅಹ್ಮದ್(Zamir Ahmad) ಈಗಾಗಲೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹೊತ್ತಲ್ಲೇ ಕೆಲ ನ್ಯಾಯಾಲಯಗಳು ಕೇಂದ್ರ ಬಿಜೆಪಿ ಸರ್ಕಾರ ಹೇಳಿದಂತೆ ಕೇಳುತ್ತಿವೆ ಎಂಬ ಗಂಭೀರ ಆರೋಪವನ್ನು ಸಿಎಂ ಪುತ್ರ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ.
ಎಚ್.ಡಿ. ಕೋಟೆಯಲ್ಲಿ ಆಯೋಜನೆಗೊಂಡಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮಗೆ ತನಿಖೆ ಬಗ್ಗೆ ಭಯ ಇಲ್ಲ. ನಾವು ಯಾವುದೇ ತಪ್ಪು ಮಾಡಿಲ್ಲ. ತನಿಖಾ ಸಂಸ್ಥೆಗಳನ್ನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಕೆಲ ಕೋರ್ಟ್ಗಳು ಕೂಡ ಕೇಂದ್ರ ಬಿಜೆಪಿ (BJP) ಹೇಳುವಂತೆ ಕೇಳುತ್ತಿವೆ ಎಂದು ದೂರಿದರು. ಇದನ್ನೂ ಓದಿ: ಅಂಬೇಡ್ಕರ್ ಇಸ್ಲಾಂ ಧರ್ಮ ಸ್ವೀಕರಿಸಲು ಸಿದ್ಧರಾಗಿದ್ದರು: ಅಜ್ಜಂಪೀರ್ ಖಾದ್ರಿ ವಿವಾದಾತ್ಮಕ ಹೇಳಿಕೆ
ಸಿದ್ದರಾಮಯ್ಯ ಮೇಲೆ ಸುಳ್ಳು ಆರೋಪದ ಮಾಡಿ ಅವರನ್ನು ಪ್ರಕರಣಗಳಲ್ಲಿ ಸಿಲುಕಿಸಬೇಕು ಎನ್ನುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರಶ್ನೆ ಮಾಡದೇ ಇದ್ದರೆ ಅವರು ಆಡಿದ್ದೇ ಆಟ ಆಗುತ್ತದೆ. ಕೇಂದ್ರ ಸರ್ಕಾರದ ಧೋರಣೆಗೆ ಜನ ಮನ್ನಣೆ ನೀಡಬಾರದು. ಬಡವರ ಪರ ಇರುವ ನಮ್ಮ ನಾಯಕರ ಪರ ನಿಮ್ಮ ಬೆಂಬಲ ಇರಬೇಕು ಎಂದು ವಿನಂತಿ ಮಾಡಿದರು.