ಬೆಂಗಳೂರು: ಕಾಲೇಜು ವಾರ್ಷಿಕೊತ್ಸವದಲ್ಲಿ ಭಾಗಿಯಾಗಿದ್ದ ವಸತಿ ಸಚಿವ ಎಂಟಿಬಿ ನಾಗರಾಜ್ ಅವರು ವಿದ್ಯಾರ್ಥಿಗಳ ಒತ್ತಾಯಕ್ಕೆ ಮಣಿದು ಹಾಡು ಹೇಳಿ ಎಲ್ಲರನ್ನೂ ರಂಜಿಸಿದ್ದಾರೆ.
ಹೊಸಕೋಟೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಂಟಿಬಿ ಹಾಡು ಹಾಡಿ ವಿದ್ಯಾರ್ಥಿಗಳಿಗೆ ಮನರಂಜನೆ ನೀಡಿದ್ದಾರೆ. ವಿದ್ಯಾರ್ಥಿಗಳ ಒತ್ತಾಯದ ಮೆರೆಗೆ `ಯಾರು ತಿಳಿಯರು ನಿನ್ನ ಭುಜ ಬಲದ ಪರಾಕ್ರಮ’ ಹಾಡು ಹಾಡಿ ವಿದ್ಯಾರ್ಥಿಗಳನ್ನ ರಂಜಿಸಿದ್ದಾರೆ.
ಇತ್ತೀಚೆಗೆ ಎಲ್ಲೇ ಹೋದರೂ ಹಾಡು ಹಾಡಿ ಎಂದು ಅಭಿಮಾನಿಗಳು ಒತ್ತಡ ಹೇರುತ್ತಿದ್ದಾರೆ. ಗಂಟಲಿಗೆ ಆಪರೇಷನ್ ಮಾಡಿಸಿಕೊಂಡಿದ್ದೇನೆ ಎಂದು ಹೇಳಿದರೂ ಹಾಡುವಂತೆ ಅಭಿಮಾನಿಗಳು ಕೇಳುತ್ತಿದ್ದಾರೆ ಎಂದು ಸಚಿವರು ಹೇಳಿದರು. ಹೀಗಾಗಿ ಆಪರೇಷನ್ ಆಗಿದ್ದರೂ ಕೂಡ ವಿದ್ಯಾರ್ಥಿಗಳ ಒತ್ತಡಕ್ಕೆ ಮಣಿದು ಸಚಿವರು ಸಖತ್ತಾಗಿ ಹಾಡು ಹಾಡಿದ್ದಾರೆ. ಇದನ್ನೂ ಓದಿ:ಕತ್ತಿ ವರಸೆ ನೃತ್ಯ ಮಾಡಿದ ಸಚಿವ ಎಂಟಿಬಿ ನಾಗರಾಜ್
ಈ ಹಿಂದೆ ಕೋಲಾರ ತಾಲೂಕಿನ ಅರಾಬಿಕೊತ್ತನೂರು ಗ್ರಾಮದಲ್ಲಿ ಕುರುಬ ಸಮುದಾಯ ದೊಡ್ಡ ದ್ಯಾವರು ಉತ್ಸವದಲ್ಲಿ ಕತ್ತಿ ಹಿಡಿದು ನೃತ್ಯ ಮಾಡಿ, ಎಲ್ಲರನ್ನೂ ರಂಜಿಸಿ ಹುಬ್ಬೇರುವಂತೆ ಮಾಡಿದ್ದರು. ಹಾಗೆಯೇ ಸಚಿವರು ಇತ್ತೀಚೆಗೆ ನಾಗಿಣಿ ಡ್ಯಾನ್ಸ್ ಕೂಡ ಮಾಡಿದ್ದರು.
ಅಷ್ಟೇ ಅಲ್ಲದೆ ಕೆಲ ದಿನಗಳ ಹಿಂದೆ ಬೆಂಗಳೂರಿನ ಗರುಡಾಚಾರ್ ಪಾಳ್ಯದಲ್ಲಿ ತಮಟೆ ಸದ್ದಿಗೆ ಭರ್ಜರಿಯಾಗಿ ಸ್ಟೆಪ್ ಹಾಕಿದ್ದರು. ಡ್ಯಾನ್ಸ್ ಮಾಡುತ್ತಿದ್ದಾಗ ತಮ್ಮ ಫೇವರೆಟ್ 2 ಏಟಿನ ತಾಳ ಹಾಕುವಂತೆ ತಮಟೆ ಬಾರಿಸುವವರಿಗೆ ಹೇಳಿದ್ದರು. ಬಳಿಕ ಬಾಯಲ್ಲಿ ನಿಂಬೆಹಣ್ಣು ಇಟ್ಟುಕೊಂಡು ಯುವಕರನ್ನು ನಾಚಿಸುವಂತೆ ಭರ್ಜರಿಯಾಗಿ ಹೆಜ್ಜೆ ಹಾಕಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತು.