ನವದೆಹಲಿ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅವರು ಸಿಮೀತ ಓವರ್ ಗಳ ಕ್ರಿಕೆಟ್ಗೆ ನಿವೃತ್ತಿ ಹೇಳುವ ಸಮಯ ಹತ್ತಿರ ಬಂದಿದೆ ಎಂದು ಮಾಜಿ ದಿಗ್ಗಜ ಆಟಗಾರ ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ಟೀಂ ಇಂಡಿಯಾದಲ್ಲಿ ಎಂಎಸ್ ಧೋನಿ ಅವರ ಸ್ಥಾನದ ಕುರಿತು ಚರ್ಚೆ ನಡೆಯುತ್ತಿರುವ ವೇಳೆಯೇ ಗವಾಸ್ಕರ್ ಧೋನಿ ಕುರಿತು ಹೇಳಿಕೆ ನೀಡಿದ್ದಾರೆ. 2019ರ ವಿಶ್ವಕಪ್ ಸೆಮಿಫೈನಲ್ ಬಳಿಕ ಧೋನಿ ಯಾವುದೇ ಪಂದ್ಯ ಆಡಿಲ್ಲ. ವೆಸ್ಟ್ ಇಂಡೀಸ್ ಟೂರ್ನಿಗೆ ಸ್ವತಃ ಅಲಭ್ಯರಾಗಿದ್ದ ಧೋನಿ ದಕ್ಷಿಣ ಆಫ್ರಿಕಾ ವಿರುದ್ಧದ ಟೂರ್ನಿಗೆ ಆಯ್ಕೆಯಾಗುವ ನಿರೀಕ್ಷೆ ಅಭಿಮಾನಿಗಳಲ್ಲಿ ಇತ್ತು. ಆದರೆ ಈ ಟೂರ್ನಿಗೂ ಧೋನಿ ಆಯ್ಕೆಯಾಗಿರಲಿಲ್ಲ. ಪರಿಣಾಮ ಧೋನಿ ಅವರ ಕ್ರಿಕೆಟ್ ವೃತ್ತಿ ಜೀವನ ಅಂತ್ಯವಾಯ್ತೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.
ಧೋನಿ ಅವರ ಮನದಲ್ಲಿ ಏನಿದೆ ಎನ್ನುವುದು ಯಾರಿಗೂ ತಿಳಿದಿಲ್ಲ. ಧೋನಿ ಮಾತ್ರ ತಮ್ಮ ಭವಿಷ್ಯದ ಬಗ್ಗೆ ಯಾವ ಚಿಂತನೆ ಹೊಂದಿದ್ದಾರೆ ಎಂಬುವುದನ್ನು ತಿಳಿಸಬಲ್ಲರು. ಈಗ ಅವರಿಗೆ 38 ವರ್ಷ ವಯಸ್ಸಾಗಿದ್ದು, ಮುಂದಿನ ಟಿ20 ವಿಶ್ವಕಪ್ ವೇಳೆಗೆ 39 ವರ್ಷವಾಗುತ್ತದೆ ಎಂದು ಗವಾಸ್ಕರ್ ಹೇಳಿದ್ದಾರೆ.
ಧೋನಿ ತಂಡದಲ್ಲಿ ಇರುವುದರಿಂದ ದೊಡ್ಡ ಲಾಭ ಸಿಗುತ್ತದೆ. ಬರೀ ರನ್ ಮಾತ್ರವಲ್ಲದೇ ವಿಕೆಟ್ ಹಿಂದೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ. ಅವರ ಒಟ್ಟಾರೆ ಪ್ರದರ್ಶನ ಧೋನಿ ಅವರನ್ನು ಅತ್ಯುತ್ತಮ ನಾಯಕ ಎಂಬ ಸ್ಥಾನದಲ್ಲಿ ತಂದು ನಿಲ್ಲಿಸಿದೆ. ಸದ್ಯದ ತಂಡದ ನಾಯಕನಿಗೂ ಧೋನಿ ಕ್ರೀಡಾಂಗಣದಲ್ಲಿ ಇದ್ದರೆ ಒತ್ತಡ ಕಡಿಮೆ ಇರುತ್ತದೆ. ಆದರೆ ಧೋನಿ ಅವರು ಗೌರವಾನಿತ್ವವಾಗಿ ತಂಡದಿಂದ ನಿರ್ಗಮಿಸಬೇಕು ಎನಿಸುತ್ತದೆ ಎಂದು ಗವಾಸ್ಕರ್ ಹೇಳಿದ್ದಾರೆ.