ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ನಿವೃತ್ತಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರ ಬಾಲ್ಯದ ಕೋಚ್ ಕೇಶವ್ ಬ್ಯಾನರ್ಜಿ ಅವರು, ಧೋನಿ ಅವರ ಪೋಷಕರೇ ಆತನನ್ನು ಮತ್ತೆ ಬ್ಲೂ ಜೆರ್ಸಿಯಲ್ಲಿ ನೋಡಲು ಇಷ್ಟ ಪಡುವುದಿಲ್ಲ ಎಂದಿದ್ದಾರೆ.
ವಿಶ್ವಕಪ್ ಸೆಮಿಫೈನಲ್ ಪಂದ್ಯದ ಸೋಲಿನ ಬಳಿಕ ಧೋನಿ ನಿವೃತ್ತಿಯ ಬಗ್ಗೆ ಸಾಕಷ್ಟು ರೂಮರ್ ಗಳು ಹರಿದಾಡುತ್ತಿದೆ. ಆದರೆ ಬಿಸಿಸಿಐ ಅಧಿಕಾರಿಗಳು ಮಾತ್ರ ಧೋನಿ ಈ ಬಗ್ಗೆ ತಮ್ಮ ಬಳಿ ಯಾವುದೇ ಚರ್ಚೆ ನಡೆಸಿಲ್ಲ. ಈಗಲೂ ಧೋನಿ ಆಡುವ ಸಾಮಥ್ರ್ಯವನ್ನ ಹೊಂದಿದ್ದು, ಅವರು ಮುಂದುವರಿಯಲಿದ್ದಾರೆ ಎಂದು ಹೇಳಿದ್ದರು.
ಇದೇ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿರುವ ಕೇಶವ್ ಬ್ಯಾನರ್ಜಿ ಅವರು, ಧೋನಿಯ ಪೋಷಕರು ತಮ್ಮ ಬಳಿ ಮಾತನಾಡಿದ್ದಾರೆ. ದೇಶದ ಎಲ್ಲಾ ಮಾಧ್ಯಮಗಳು ಕೂಡ ಇದನ್ನೇ ಹೇಳುತ್ತಿವೆ. ಭಾನುವಾರಷ್ಟೇ ಅವರ ಮನೆಗೆ ಭೇಟಿ ನೀಡಿದ್ದೆ. ಅವರು ಕೂಡ ಧೋನಿ ನಿವೃತ್ತಿಗೆ ಇದು ಉತ್ತಮ ಸಮಯ ಎಂಬ ಅಭಿಪ್ರಾಯ ಹೊಂದಿದ್ದಾರೆ ಎಂದು ಹೇಳಿದ್ದಾರೆ.
ಒಂದು ವರ್ಷದ ಹಿಂದೆಯೇ ಧೋನಿ ಪೋಷಕರು ಈ ಬಗ್ಗೆ ಅವರೊಂದಿಗೆ ಮಾತನಾಡಿದ್ದು, ನಿವೃತ್ತಿಯ ಸಮಯವನ್ನು ಒಂದು ವರ್ಷದ ಬಳಿಕ ನಿರ್ಧಾರ ಮಾಡಲು ಹೇಳಿದ್ದರು. ಆದರೆ ನಾನು ಅವರಲ್ಲಿ ಮನವಿ ಮಾಡಿದ್ದು, ಧೋನಿ 38 ವರ್ಷ ಆಗುವವರೆಗೂ ಆಟದಲ್ಲಿ ಮುಂದುವರಿಸಲು ಹೇಳಿದ್ದೇನೆ. 2020ರ ಟಿ20 ಟೂರ್ನಿಯ ಬಳಿಕ ಅವರು ತಮ್ಮ ನಿರ್ಧಾರವನ್ನ ಕೈಗೊಳ್ಳಬಹುದು ಎಂದಿದ್ದಾರೆ.
ಇತ್ತ ವಿಶ್ವಕಪ್ ಬಳಿಕ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದ್ದು, 3 ಟಿ20, 3 ಏಕದಿನ ಪಂದ್ಯಗಳ ಸರಣಿಯಲ್ಲಿ ಭಾಗವಹಿಸಲಿದೆ. ಈ ಸರಣಿಯಲ್ಲಿ ಧೋನಿ ಭಾಗವಹಿಸುವುದಿಲ್ಲ ಎನ್ನಲಾಗಿದ್ದು, ಆದರೆ ವೆಸ್ಟ್ ಇಂಡೀಸ್ ಮಾತ್ರವಲ್ಲದೇ ಇತರ ಟೂರ್ನಿಗಳಲ್ಲೂ ಧೋನಿ ತಂಡದ ಜೊತೆ ಇರುವುದು ಬಹುತೇಕ ಅನುಮಾನ ಎನ್ನಲಾಗಿದೆ.
ಧೋನಿ ಸ್ಥಾನವನ್ನು ಯುವ ಆಟಗಾರ ರಿಷಬ್ ಪಂತ್ ತುಂಬಲಿದ್ದು, ಮತ್ತೊಬ್ಬ ಅನುಭವಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ತಂಡದಲ್ಲಿದ್ದಾರೆ. ಆದರೆ ಧೋನಿ ಅವರನ್ನು ಮುಂದಿನ ಟೂರ್ನಿಗಳಿಗೆ ಆಯ್ಕೆ ಸಮಿತಿ ಪರಿಗಣಿಸುತ್ತಾ ಎಂಬ ಕುತೂಹಲವೂ ಅಭಿಮಾನಿಗಳಲ್ಲಿದೆ.