ನವದೆಹಲಿ: ಟೀಂ ಇಂಡಿಯಾ ತಂಡವನ್ನು 2007 ರಿಂದ ಹಲವು ಟೂರ್ನಿಗಳಲ್ಲಿ ಮುನ್ನಡೆಸಿದ್ದ ಎಂಎಸ್ ಧೋನಿ ವಿಶ್ವಕಪ್ ಸೇರಿದಂತೆ ಹಲವು ಸರಣಿಗಳಲ್ಲಿ ಜಯಗಳಿಸಲು ಕಾರಣರಾಗಿದ್ದರು. ಆದರೆ ಅನಿರೀಕ್ಷಿತವಾಗಿ 2017 ರಲ್ಲಿ ಏಕದಿನ, ಟಿ20 ಪಂದ್ಯಗಳ ತಂಡದ ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರ ಪ್ರಕಟಿಸಿದ್ದ ಧೋನಿ ಎಲ್ಲರಿಗೂ ಶಾಕ್ ನೀಡಿದ್ದರು. ಆದರೆ ಸದ್ಯ ತಾವು ಸೀಮಿತ ಓವರ್ ಗಳ ನಾಯಕತ್ವದಿಂದ ಕೆಳಗಿಳಿಯಲು ಕಾರಣವೇನು ಎಂಬುವುದನ್ನು ಖಾಸಗಿ ಕಾರ್ಯಕ್ರಮವೊಂದರಲ್ಲಿ ರಿವೀಲ್ ಮಾಡಿದ್ದಾರೆ.
ರಾಂಚಿಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಈ ಕುರಿತು ಮಾತನಾಡಿರುವ ಧೋನಿ, ಕೊಹ್ಲಿ ತಂಡದ ನಾಯಕತ್ವ ವಹಿಸಲು ಈ ನಿರ್ಧಾರ ಮಾಡಿದ್ದೆ. ಏಕೆಂದರೆ 2019ರ ಐಸಿಸಿ ವಿಶ್ವಕಪ್ಗೆ ತಂಡವನ್ನು ಸಿದ್ಧಪಡಿಸಲು ಹೊಸ ನಾಯಕತ್ವ ವಹಿಸುವ ಆಟಗಾರನಿಗೆ ಸಮಯವಕಾಶ ನೀಡಬೇಕಿತ್ತು. ಅಲ್ಲದೇ ಶಕ್ತಿಶಾಲಿ ತಂಡ ಕಟ್ಟುವ ಅವಕಾಶ ನೀಡಲು ನಾಯಕತ್ವದಿಂದ ಕೆಳಗಿಳಿಯಲೇ ಬೇಕಾಗಿತ್ತು ಎಂದು ತಂಡದ ಭವಿಷ್ಯ ಕುರಿತ ತಮ್ಮ ಪ್ಲಾನ್ ಅನ್ನು ಬಿಚ್ಚಿಟ್ಟಿದ್ದಾರೆ.
ಪ್ರತಿಯೊಂದು ತಂಡದ ನಾಯಕ ಕೂಡ ತನ್ನ ತಂಡದಲ್ಲಿ ಬಲಿಷ್ಠ ಆಟಗಾರರು ಇರಲು ಬಯಸುತ್ತಾನೆ. ಅದರಂತೆ ವಿಶ್ವಕಪ್ ಟೂರ್ನಿಯನ್ನು ಎದುರಿಸಲು ಟೀಂ ಇಂಡಿಯಾಗೆ ಸಿದ್ಧತೆ ನಡೆಸಲು ಸಾಕಷ್ಟು ಸಮಯವಕಾಶ ಅಗತ್ಯವಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯ ಸೋಲಿನ ಕುರಿತ ಪ್ರಶ್ನೆಗೆ ಉತ್ತರಿಸಿರುವ ಧೋನಿ, ಇಂಗ್ಲೆಂಡ್ ಸರಣಿ ಹಲವು ಸವಾಲುಗಳಿಂದ ಕೂಡಿದ ಕಾರಣ ಟೂರ್ನಿಗೂ ಮೊದಲು ತಂಡಕ್ಕೆ ಕೆಲ ತರಬೇತಿ ಅಗತ್ಯವಿತ್ತು. ಅದರಲ್ಲೂ ಬ್ಯಾಟ್ಸ್ ಮನ್ ಗಳಿಗೆ ಸರಣಿಯಲ್ಲಿ ಸಾಕಷ್ಟು ಸವಾಲುಗಳು ಎದುರಾಗಿತ್ತು ಎಂದು ತಿಳಿಸಿದ್ದಾರೆ.
ಸೀಮಿತ ಓವರ್ ಗಳ ಪಂದ್ಯಗಳ ನಾಯಕತ್ವ ತೋರೆಯುವ ಮುನ್ನವೂ ಇಂತಹದ್ದೇ ದಿಢೀರ್ ನಿರ್ಧಾರ ಕೈಗೊಂಡಿದ್ದ ಧೋನಿ 2014 ರ ಆಸೀಸ್ ಟೆಸ್ಟ್ ಟೂರ್ನಿಯ ಮಧ್ಯದಲ್ಲೇ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದಿದ್ದರು. ಅಲ್ಲದೇ ನಾಯಕತ್ವದಿಂದ ಕೆಳಗಿಳಿಯುತ್ತಿದಂತೆ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿಯನ್ನು ಘೋಷಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv