ಬೆಂಗಳೂರು: ಇಬ್ರಾಹಿಂ ಒಬ್ಬ ಜೋಕರ್, ನೀವು ಹುಟ್ಟಿಸಿದ ಮಕ್ಕಳು ನಿಮ್ಮನ್ನ ಏಕೆ ಒಪ್ಪಿಕೊಳ್ಳಲಿಲ್ಲ ಅವರನ್ನು ಏಕೆ ನೀವು ಸರಿಯಾಗಿ ನೋಡಿಕೊಳ್ಳಲಿಲ್ಲ, ಏಕೆ ರಕ್ಷಿಸಿಕೊಳ್ಳಲಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ವಿರುದ್ಧ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭದ್ರಾವತಿಯಲ್ಲಿ ಇಬ್ರಾಹಿಂ ಮಾಡಬಾರದ ನೀಚ ಕೆಲಸ ಮಾಡಿದ್ದಾರೆ. ನೀನು ಮೊದಲು ಯಾವ ಪಕ್ಷದಲ್ಲಿ ಇದ್ದೆ, ಜನತಾದಳದಿಂದ ನೀನು ಕಾಂಗ್ರೆಸ್ಗೆ ಬರಲಿಲ್ಲವೇ? ನಿನಗೆ ಏನೆಂದು ಕರೆಯಬೇಕು. ನೀನು ಯಾರ ಮಕ್ಕಳಾದೆ, ನಿನ್ನ ಭಾಷೆಯಲ್ಲೇ ಉತ್ತರಿಸುತ್ತಿದ್ದೆ ಆದರೆ ನೀನು ಬಳಸಿದ ಭಾಷೆ ಬಳಸಿದರೆ ಜನ ಒಪ್ಪಲ್ಲ ಎಂದು ಇಬ್ರಾಹಿಂ ವಿರುದ್ಧ ಏಕವಚನದಲ್ಲೇ ಹರಿಹಾಯ್ದರು.
ಜನತಾ ಪರಿವಾರದಲ್ಲಿದ್ದಾಗ ಮಾಡಬಾರದ್ದನ್ನು ಮಾಡಿ ಸರ್ವಜ್ಞ ವಚನ ಹೇಳಿದೆ. ನಿನ್ನ ಜನ್ಮಕ್ಕೆ ಯಾರು ಕಾರಣ? ಜನ್ಮ ಕೊಟ್ಟ ಪಕ್ಷ ಯಾವುದು? ಇಂದಿರಾ ಗಾಂಧಿ ಬಗ್ಗೆ ಮಾತಾಡಬಾರದನ್ನು ಮಾತನಾಡಿದೆ. ಕಡೆಗೆ ನೀನು ಅದೇ ಪಕ್ಷಕ್ಕೆ ಸೇರಿದೆ. ನಿಮ್ಮಂತ ಅಯೋಗ್ಯರಿಂದ ಬಿಜೆಪಿ ಪಾಠ ಕಲಿಯುವ ಅವಶ್ಯಕತೆ ಇಲ್ಲ. ಮಾಜಿ ಸಚಿವ ಶ್ರೀನಿವಾಸ್ ಕೂಡ ಯಡಿಯೂರಪ್ಪನವರ ಬಗ್ಗೆ ಏಕ ವಚನದಲ್ಲಿ ಮಾತನಾಡುತ್ತಾರೆ. ಈ ರೀತಿ ಮೋದಿ ಹಾಗೂ ಯಡಿಯೂರಪ್ಪನವರ ವಿರುದ್ಧ ಏಕವಚನ ಬಳಸಿದರೆ ನಮಗೂ ಆ ರೀತಿ ಭಾಷೆ ಬಳಸಲು ಬರುತ್ತದೆ, ನಾವು ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ನಮ್ಮ ಸಂಸದರು, ಕೇಂದ್ರ ಸಚಿವರು ನಮ್ಮ ಪ್ರಧಾನಿಗೆ ನೆರೆ ಪರಿಹಾರದ ಮನವರಿಕೆ ಮಾಡಿಕೊಟ್ಟಿದ್ದು, ಹಾದಿ ಬೀದಿಯಲ್ಲಿ ಯಾರೂ ಚರ್ಚೆ ಮಾಡಬೇಡಿ, ಪಕ್ಷಕ್ಕೂ, ಸರ್ಕಾರಕ್ಕೂ ಮುಜುಗರ ತರಬೇಡಿ. ಬಸನಗೌಡ ಪಾಟೀಲ್ ಯತ್ನಾಳ್ ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಕುರಿತು ಯಾವುದೇ ಅಸಮಾಧನವಿಲ್ಲ ಎಂದು ಸ್ಪಷ್ಟಪಡಿಸಿದರು.
ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಹಣ ಲೂಟಿ ಮಾಡಿ ಖಜಾನೆ ಖಾಲಿ ಮಾಡಿದ್ದಕ್ಕೆ ಈಗ ಮುಖ್ಯಮಂತ್ರಿ ಯಡಿಯೂರಪ್ಪನವರು ಸಂಪನ್ಮೂಲ ಕ್ರೂಢೀಕರಣ ಮಾಡುತ್ತಿದ್ದಾರೆ. ನೆರೆ ಪರಿಹಾರಕ್ಕೆ ನಮಗೆ ತೊಂದರೆ ಆಗಿಲ್ಲ. ಖಜಾನೆ ಖಾಲಿಯಿಂದ ತಾತ್ಕಾಲಿಕವಾಗಿ ಸಮಸ್ಯೆಯಾಗಿದೆ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಹಣಕಾಸು ಸಚಿವರಾಗಿದ್ದಾಗ ಏನ್ ಮಾಡಿದರು? ಅವರ ಕಾಲದಲ್ಲಿ ಹಣಕಾಸು ಪರಿಸ್ಥಿತಿ ಹೇಗಿತ್ತು ಎಂಬುದರ ಬಗ್ಗೆ ಲೆಕ್ಕ ಕೊಡಲಿ ಎಂದು ಹರಿಹಾಯ್ದರು.
ನಿನ್ನ ಬಳಿ ಸಾವಿರ ಕೋಟಿ ಇರಲಿ, ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಹೀಗೆ ಮಾತನಾಡಬಾರದು. ಜನರ ಸಂಕಷ್ಟಗಳನ್ನು ಮೊದಲು ಕೇಳಬೇಕು ಎಂದು ಜನ ಅಧಿಕಾರ ಕೊಟ್ಟಿರುವುದು ಅವರ ಕಷ್ಟ ಆಲಿಸುವುದನ್ನು ಬಿಟ್ಟು ನನ್ನದೇ 100 ಎಕರೆ ಹೋಗಿದೆ ಅಂದರೆ ಹೇಗೆ ಎಂದು ಡಿಸಿಎಂ ಲಕ್ಷ್ಮಣ ಸವದಿಗೆ ತಿರುಗೇಟು ನೀಡಿದ್ದಾರೆ.