ನಿಮ್ಮ ಮಗನ ಎಂಪಿ ಮಾಡಲು ನನ್ನ ಮೇಲೆ ಆರೋಪ ಮಾಡ್ತಿದ್ದೀರಿ: ಸಿದ್ದು ವಿರುದ್ಧ ಪ್ರತಾಪ್‌ ಸಿಂಹ ವಾಗ್ದಾಳಿ

Public TV
4 Min Read
pratap simha

– ನಿಮ್ಮಂಥ ತಂದೆ ಪ್ರಪಂಚದಲ್ಲೇ ಎಲ್ಲೂ ಸಿಗಲ್ಲ ಅಂತಾ ಸಿದ್ದುಗೆ ಟಾಂಗ್‌
– ವಯೋವೃದ್ಧ ತಾಯಿ, ನನ್ನ ತಂಗಿಯನ್ನೂ ಅರೆಸ್ಟ್‌ ಮಾಡಿ
– ಸಂಸದ ಪ್ರತಾಪ್‌ ಸಿಂಹ ಭಾವುಕ

ಮೈಸೂರು: ನನ್ನ ಮುಗಿಸಲು ಎಲ್ಲಾ ಪ್ರಯತ್ನ ಮಾಡುತ್ತಿದ್ದೀರಿ. ಕೊನೆಗೆ ನನ್ನ ಜೀವನ ತೆಗೆಯಬಹುದು ಅಷ್ಟೇ ಎಂದು ಸಂಸದ ಪ್ರತಾಪ್‌ ಸಿಂಹ (Pratap Simha) ಭಾವುಕರಾಗಿ ಮಾತನಾಡಿದ್ದಾರೆ.

ಮರಗಳ್ಳತನ ಪ್ರಕರಣದಲ್ಲಿ ಸಹೋದರ ವಿಕ್ರಂ ಸಿಂಹ ಬಂಧನದ ಬಗ್ಗೆ ಮಾತನಾಡುವಾಗ ಸಂಸದರು ಭಾವುಕರಾಗಿದ್ದಾರೆ. ಅಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಸಹೋದರನ ಬಂಧನ; ಕೊನೆಗೂ ಮೌನ ಮುರಿದ ಸಂಸದ ಪ್ರತಾಪ್‌ ಸಿಂಹ

Vikram Simha

ಸಿದ್ದರಾಮಯ್ಯ ಸರ್ ಬ್ರಿಲಿಯಂಟ್ ಫಾದರ್, ಬ್ರಿಲಿಯಂಟ್ ಪೊಲಿಟಿಷಿಯನ್. ನಿಮ್ಮ ಮಗನನ್ನ ಎಂಪಿ ಮಾಡಿಕೊಳ್ಳುವ ಸಲುವಾಗಿ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದೀರಿ. ಎಫ್‌ಐಆರ್‌ನಲ್ಲಿ ಹೆಸರಿಲ್ಲದಿದ್ದರೂ ನನ್ನ ತಮ್ಮನನ್ನು ಅರೆಸ್ಟ್ ಮಾಡಿಸಿದ್ದೀರಿ ಎಂದು ಟೀಕಿಸಿದ್ದಾರೆ.

ಮನೆಯಲ್ಲಿ ವಯೋವೃದ್ಧ ತಾಯಿ ಇದ್ದಾಳೆ. ನನ್ನ ತಂಗಿ ಇದ್ದಾಳೆ,‌ ಅವರನ್ನು ಅರೆಸ್ಟ್ ಮಾಡಿಬಿಡಿ. ನನ್ನ ತೇಜೋವಧೆ ಮಾಡಿದ್ದಾಯಿತು. ಈಗ ನನ್ನ ಕುಟುಂಬವನ್ನ ಮುಗಿಸಲು ಪ್ರಯತ್ನ ಮಾಡುತ್ತಿದ್ದೀರಿ ಎಂದು ನೊಂದು ನುಡಿದಿದ್ದಾರೆ. ಇದನ್ನೂ ಓದಿ: ವಿಕ್ರಂ ಸಿಂಹ ಬಂಧನದಿಂದ ನಿಸರ್ಗದ ಶೋಕಕ್ಕೆ ನ್ಯಾಯ ಸಿಕ್ಕಂತಾಗಿದೆ – ಕಾಂಗ್ರೆಸ್ ಟ್ವೀಟ್

ಮಾನ್ಯ ಸಿದ್ದರಾಮಯ್ಯ ಅವರಲ್ಲಿ ಸಾಷ್ಟಾಂಗ ನಮಸ್ಕಾರಗಳು. ಅವರನ್ನ ನಾನು ಶ್ಲಾಘನೆ ಮಾಡಬೇಕು ಅಂದುಕೊಂಡಿದ್ದೇನೆ. ತನ್ನ ಮಗನ ರಾಜಕೀಯ ಭವಿಷ್ಯಕ್ಕಾಗಿ, ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಲು ಯಾರನ್ನ ಬೇಕಾದರೂ ತುಳಿಯುತ್ತಾರೆ. ಇದನ್ನ ಸಿದ್ದರಾಮಯ್ಯ ಅವರಿಂದ ಕಲಿಯಬೇಕು. ಇಂತಹ ತಂದೆ ಎಲ್ಲರಿಗೂ ಸಿಗಲ್ಲ. ನೀವೊಬ್ಬ ಬ್ರಿಲಿಯೆಂಟ್ ಫಾದರ್. ನಿಜಕ್ಕೂ‌ ನಿಮ್ಮನ್ನ ಮೆಚ್ಚಿದ್ದೇನೆ. ನಿಮಗೆ ಸಾಷ್ಟಾಂಗ ನಮಸ್ಕಾರಗಳು ಎಂದು ಟಾಂಗ್‌ ಕೊಟ್ಟಿದ್ದಾರೆ.

Pratap Simha and Vikram Simha

ನಿಮ್ಮಂತಹ ತಂದೆ ಜಗತ್ತಿನಲ್ಲಿ ಯಾರಿಗೂ ಸಿಗಲ್ಲ. ಎಲ್ಲಾ ಮಕ್ಕಳಿಗೂ ನಿಮ್ಮಂತಹ ತಂದೆ ಸಿಗಲ್ಲ. ಪ್ರತಾಪ್‌ ಸಿಂಹ ಅಡ್ಡಿ‌ ಆಗಿದ್ದಾನೆ ಅಂತಾ ಮುಗಿಸಲು ಮುಂದಾಗಿದ್ದೀರಿ. ನಿಮ್ಮಂತಹ ತಂದೆ ಪ್ರಪಂಚದಲ್ಲೇ ಎಲ್ಲೂ ಸಿಗಲ್ಲ. ಎರಡನೇ ಕಾರಣ, ನೀವು ಬ್ರಿಲಿಯೆಂಟ್ ಪಾಲಿಟಿಷಿಯನ್ ಎಂದು ತಿರುಗೇಟು ನೀಡಿದ್ದಾರೆ.

ಬೆಳಗಾವಿಯಲ್ಲಿ ಹಿಂದುಳಿದ ಮಹಿಳೆಯನ್ನ ಬೆತ್ತಲೆ ಮಾಡಿ ಮೆರವಣಿಗೆ ಮಾಡಿದ್ದಾರೆ. ನನ್ನ ವಿಷ್ಯ ಇಟ್ಟುಕೊಂಡು ಆ ವಿಚಾರವನ್ನ ನೀವು ಡೈವರ್ಟ್ ಮಾಡ್ತೀರಿ. ನೀವು, ನಿಮ್ಮ ಸಚಿವ ಸಂಪುಟದ ಸದಸ್ಯರು, ಡಿಸಿಎಂ‌ ಎಲ್ಲರೂ ಪಾರ್ಲಿಮೆಂಟ್ ಪಾಸ್ ಇಟ್ಕೊಂಡು ಮಾತಾಡ್ತೀರಿ. ನಿಮಗೆ 40 ವರ್ಷದ ಅನುಭವವಿದೆ. ನನ್ನ ಹೆಸರು ಇಟ್ಟುಕೊಂಡು, ತನಿಖೆ ನಡೆಸಬೇಕೆಂದು ವಿಷಯ ಹಸ್ತಾಂತರಿಸಿದ್ರಿ. ಇಲ್ಲಿ ನಿಮ್ಮ ಮಗ ಸುಪುತ್ರ ಮಿನಿಟ್ ಕೊಡುವ ಬದಲು ನನ್ನ ವಿರುದ್ಧ ತನಿಖೆ‌‌ ಆಗಬೇಕು ಅಂತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

siddu

ಮಧು ಬಂಗಾರಪ್ಪ ಅವರು ಆರೂವರೆ ಕೋಟಿ ಚೆಕ್ ಬೌನ್ಸ್ ಮಾಡಿರುವ ಘಟನೆ ನಡೆದಿದೆ. ಆರು ತಿಂಗಳು ಜೈಲು ಶಿಕ್ಷೆಯ ತೀರ್ಪು ಬಂದಿದೆ. ಆದರೆ ಪ್ರತಾಪ್‌ ಸಿಂಹನ ತಮ್ಮ ಅರೆಸ್ಟ್. ಸಿನಿಮೀಯ ಶೈಲಿಯಲ್ಲಿ ಚೇಸ್ ಮಾಡಿ ಬಂಧಿಸಿದ್ದಾರೆ. ನಿಜಕ್ಕೂ‌ ನೀವು ಬ್ರಿಲಿಯಂಟ್ ಪಾಲಿಟಿಕ್ಸ್ ಮಾಡಿದ್ದೀರಿ. ಡಿ.16 ರಂದು ಬೇಲೂರಿನ ಜಮೀನಿನ ವಿಚಾರಕ್ಕೆ ನನ್ನ ತಮ್ಮನ ಹೆಸರು ಎಳೆ ತಂದ್ರಿ. ಮರವನ್ನ ಕಡಿದಿದ್ದಾರೆ‌ ಎಂದು ಎಫ್‌ಐಆರ್ ದಾಖಲಾಗಿದೆ. ಪ್ರಕರಣದಲ್ಲಿ‌ ಜಯಮ್ಮ, ರಾಜೇಶ್ ಶೆಟ್ಟಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ರವಿ ಎಂಬವರು ಸಹಾಯ ಮಾಡಿದ್ರು ಪರಾರಿ ಆಗಿದ್ದಾರೆ. ಈವರಗೆ ಮೂವರನ್ನು ಹಿಡಿಯಲು ಆಗಿಲ್ಲ ಎಂದು ಬೇಸರಿಸಿದ್ದಾರೆ. ಇದನ್ನೂ ಓದಿ: ಮರಗಳ್ಳತನ ಪ್ರಕರಣದಲ್ಲಿ ಸಂಸದ ಪ್ರತಾಪ್‌ ಸಿಂಹ ಸಹೋದರ ವಿಕ್ರಂ ಸಿಂಹ ಬಂಧನ

ಎಲ್ಲಾ ಮರಗಳನ್ನ ಹಾಸನದ ಅರಣ್ಯ ಭವನದಲ್ಲಿ ಇರಿಸಿದ್ದೀರಿ. 24 ನೇ ತಾರೀಖಿನವರಗೆ ನೀವು ಅವರನ್ನ ಬಂಧಿಸಲು ಸಾಧ್ಯವಾಗಿಲ್ಲ. ಹನುಮ ಜಯಂತಿ‌ ಸಂದರ್ಭ ನಾನು ಒಂದು ‌ಹೇಳಿಕೆ ನೀಡಿದ್ದೆ. ಅದಾದ ಎರಡೇ ಗಂಟೆಯಲ್ಲಿ ಪ್ರತಾಪ್‌ ಸಿಂಹನ ತಮ್ಮ ಮರಗಳ್ಳತನ ಮಾಡಿದ ಅಂತ ಕಾಂಗ್ರೆಸ್‌ನವರು ಪೋಸ್ಟ್ ಹಾಕಿದ್ರಿ. ಎಫ್‌ಐಆರ್‌ನಲ್ಲಿ ನನ್ನ ತಮ್ಮನ ಹೆಸರೇ ಇಲ್ಲ. ಆದರೂ ಆತನನ್ನ ಬಂಧಿಸುವ ಮೂಲಕ ಪ್ರತಾಪ್‌ ಸಿಂಹನನ್ನ ಮುಗಿಸುವ ಯತ್ನಿಸಿದ್ದೀರಿ. ನನ್ನ ತಮ್ಮ ತಲೆ ಮರೆಸಿಕೊಂಡಿದ್ದಾನಾ? ಎರಡು‌ ದಿನ ಮೊದಲೇ ನನ್ನ ತಮ್ಮ ಅರಣ್ಯ ಇಲಾಖೆಗೆ ತೆರಳಿ ಹೇಳಿಕೆ ದಾಖಲಿಸಿದ್ದಾನೆ. ಆತನ ವಿರುದ್ಧ ಎಫ್‌ಐಆರ್ ಆಗಿಲ್ಲ. ಆತ ತಲೆ ಮರೆಸಿಕೊಂಡಿರಲಿಲ್ಲ. ಯಾಕೆ ‌ದಾರಿ ತಪ್ಪಿಸುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ನಿಮ್ಮ ರಾಜಕೀಯ ಭವಿಷ್ಯಕ್ಕಾಗಿ ಪ್ರತಾಪ್‌ ಸಿಂಹನನ್ನ ಎಲ್ಲಾ‌ ರೀತಿ ತುಳಿಯುವ ಪ್ರಯತ್ನ ಮಾಡ್ತೀರಿ? ನನ್ನ ಚಾರಿತ್ರ್ಯವಧೆ ಮಾಡ್ತೀರಿ? ನನ್ನ ಕುಟುಂಬದವರನ್ನ ಬೀದಿಗೆ ಎಳೆ ತರುತ್ತಿದ್ದೀರಿ? ನಿನ್ನೆ ಮೂರು ಗಂಟೆಗೆ ಅರೆಸ್ಟ್ ಮಾಡಿದ್ದೀರಿ? ಆದರೆ ಈವರಗೆ ಯಾಕೆ‌ ಕೋರ್ಟಿಗೆ ಹಾಜರುಪಡಿಸಿಲ್ಲ. ಪಿಸಿಎಫ್‌ಗೆ ಕರೆ ಮಾಡಿ‌ ಮಾತನಾಡುತ್ತಿದ್ದೀನಿ. ನಿಮ್ಮ ತಮ್ಮನಿಗೆ ತೊಂದರೆ ಕೊಡಲ್ಲ ಅಂತೀರಿ. ಇಷ್ಟೊತ್ತು ಯಾಕೆ ಇಟ್ಕೊಂಡಿದ್ದೀರಿ? ನನ್ನ ಮೇಲೆ‌ ಎರಡು‌ ಕ್ರಿಮಿನಲ್‌ ಕೇಸ್ ಹಾಕಿದ್ರಿ ಎಂದು ಅಸಮಾಧಾನ ಹೊರಹಾಕಿದ್ದಾರೆ.

ನಮ್ಮ ವಯೋವೃದ್ಧ ತಾಯಿ, ತಂಗಿ ಅರೆಸ್ಟ್ ಮಾಡಿ. ನಿಮ್ಮ‌ ಕುಟುಂಬ ರಾಜಕಾರಣವೇ ಮುಂದುವರಿಯಲಿ. ನಿಮಗೆ ಬಹಳಷ್ಟು‌ ದಾರಿಗಳಿಲ್ಲ ಸರ್. ತಾಯಿ ಚಾಮುಂಡಿ, ಕಾವೇರಿ ತಾಯಿ ಬಿಡಲ್ಲ. ಮೈಸೂರು-ಕೊಡಗು ಜನರು ಬಿಡಲ್ಲ ಎಂದು ನೊಂದು ನುಡಿದಿದ್ದಾರೆ.

Share This Article