ಹಾಸನ: ಆರ್ಎಸ್ಎಸ್ ಮಾತು ಮೀರಿ ಬಿಜೆಪಿ ನಡೆಯುತ್ತಿದೆಯೋ ಅಥವಾ ಆರ್ಎಸ್ಎಸ್ ಮಾತು ಕೇಳದೆ ಸರ್ಕಾರ ನಡೆಸುವ ತೀರ್ಮಾನವನ್ನು ಬಿಜೆಪಿ ತೆಗೆದುಕೊಂಡಿದೆಯೋ ಗೊತ್ತಿಲ್ಲ ಎಂದು ಸಂಸದ ಪ್ರಜ್ವಲ್ ರೇವಣ್ಣ ವ್ಯಂಗ್ಯವಾಡಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಲಂಕಾ ಹಾಗೂ ಗೋವಾ ರೀತಿ ನಮ್ಮ ರಾಜ್ಯದಲ್ಲೂ ಕ್ಯಾಸಿನೋ ಪ್ರಾರಂಭಿಸಬೇಕು ಹಾಗೂ ನೀರಾ ಜಾರಿಗೆ ತರುವ ಉದ್ದೇಶವನ್ನು ವ್ಯಕ್ತಪಡಿಸಿದ ಬಿಜೆಪಿ ನಾಯಕರಿಗೆ ಟಾಂಗ್ ನೀಡಿದ್ದಾರೆ.
ಮಂತ್ರಿ ಒಂದು ಹೇಳಿಕೆ ಕೊಡೋದು ಮತ್ತು ಆ ಪಕ್ಷಕ್ಕೆ ಬೆಂಬಲ ಕೊಡುತ್ತ ಬಂದಿರುವ ಸಂಘಟನೆಯ ಚಿಂತನೆ ಎರಡೂ ಸರಿ ಹೊಂದುತ್ತಿಲ್ಲ ಎಂಬುದು ನನ್ನ ಭಾವನೆ. ಒಂದು ಕಡೆ ಪ್ರಚಾರ ಮಾಡೋದೆ ಬೇರೆ. ಯೋಜನೆ ತರುತ್ತಿರೋದೆ ಬೇರೆಯಾಗಿದೆ. ಯಾವುದೇ ಯೋಜನೆ ತರುವಾಗ ಜನರಿಗೆ, ಬಡವರಿಗೆ ಅನ್ಯಾಯ ಆಗುತ್ತದೆಯೇ ಎಂಬುದರ ಚಿಂತನೆ ಮಾಡಬೇಕು. ಆರ್ಎಸ್ಎಸ್ ಇದನ್ನೆಲ್ಲ ವಿರೋಧಿಸುವ ಸಂಘಟನೆಯಾಗಿದೆ. ಆದರೆ ಆರ್ಎಸ್ಎಸ್ನ ಮಾತು ಮೀರಿ ಬಿಜೆಪಿ ಯೋಜನೆ ಜಾರಿಗೆ ತರುತ್ತಿದೆ. ಅಂದರೆ ವಿಶೇಷತನ ಇದೆ ಅನ್ನಿಸುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.
ಕಠಿಣ ಶಿಕ್ಷೆಯಾಗಲಿ
ಪಾಕಿಸ್ತಾನದ ಪರ ಜೈಕಾರ ಕೂಗಿದವರಿಗೆ ಸರ್ಕಾರ ಕಠಿಣ ಶಿಕ್ಷೆ ನೀಡಬೇಕು. ಯಾರೇ ಒಬ್ಬ ವ್ಯಕ್ತಿ ಅನ್ನದ ಋಣ, ಭೂಮಿ ಋಣವನ್ನು ಭಾರತ ಮಾತೆಗೆ ಸಲ್ಲಿಸಬೇಕು. ಸರ್ಕಾರ ತಂದಿರುವ ನಿಯಮ ಇಷ್ಟ ಇಲ್ಲ ಎಂದರೆ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಯಾರೂ ಬೇಡ ಅನ್ನಲ್ಲ. ಆದರೆ ನಮ್ಮನ್ನು ಸಾಕಿ, ಸಲಹಿ ದೊಡ್ಡಮಟ್ಟಕ್ಕೆ ಬದುಕುತ್ತಿರುವುದಕ್ಕೆ ಕಾರಣವಾದ ದೇಶಕ್ಕೆ ಅವಮಾನ ಮಾಡಬಾರದು. ವೇದಿಕೆ ಮೇಲೆ ಪ್ರಚಾರಕ್ಕಾಗಿ ಮಾತನಾಡುವವರಿಗೆ ಸರ್ಕಾರ ಕಠಿಣ ಶಿಕ್ಷೆ ನೀಡಬೇಕು. ಈ ಬಗ್ಗೆ ಸೂಕ್ತ ತನಿಖೆ ಮಾಡಿ, ಅವಳು ನಿಜವಾಗಿಯೂ ಪಾಕಿಸ್ಥಾನಕ್ಕೆ ಜೈಕಾರ ಹಾಕಿದ್ದೇ ಆಗಿದ್ದಲ್ಲಿ ತಕ್ಕ ಶಿಕ್ಷೆ ಆಗಬೇಕು. ವಾಕ್ ಸ್ವಾತಂತ್ರ್ಯದ ಹೆಸರಲ್ಲಿ ದೇಶಕ್ಕೆ ಅಗೌರವ ತರುವ ಕೆಲಸ ಮಾಡಬಾರದು ಎಂದು ಆಗ್ರಹಿಸಿದರು.