ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಅನಂತಕುಮಾರ್ ಹೆಗಡೆ ಅವರ ಟ್ವಿಟ್ಟರ್ ಖಾತೆಯನ್ನು ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಲಾಕ್ ಮಾಡಲಾಗಿದೆ.
ಈ ಬಗ್ಗೆ ಅನಂತಕುಮಾರ್ ಹೆಗಡೆ ಅವರಿಗೆ ನೋಟಿಸ್ ಕಳುಹಿಸಿರುವ ಟ್ವಿಟ್ಟರ್, ‘ನಿಮ್ಮ ಖಾತೆ ನಮ್ಮ ಕೆಲವು ನಿಯಮಗಳನ್ನು ಉಲ್ಲಂಘಿಸಿದೆ’ ಎಂದು ಗಮನಕ್ಕೆ ತಂದಿದೆ. ಅಷ್ಟಕ್ಕೂ ಖಾತೆಯನ್ನು ಅನ್ ಲಾಕ್ ಮಾಡಲು ನಿಯಮಗಳನ್ನು ಉಲ್ಲಂಘಿಸಿದ ಟ್ವೀಟ್ ಅನ್ನು ಡಿಲಿಟ್ ಮಾಡುವಂತೆ ಸೂಚಿಸಿದೆ. ವೆರಿಫೈಡ್ ವಿಐಪಿ ಖಾತೆ ಹೊಂದಿದ್ದ ಸಂಸದ ಅನಂತಕುಮಾರ್ ಹೆಗಡೆ ಅವರಿಗೆ ಟ್ವಿಟರ್ ನಲ್ಲಿ 74,300 ಫಾಲೊವರ್ಸ್ ಗಳಿದ್ದರು. 2016ರಿಂದ ಅವರು ಟ್ವಿಟರ್ ನಲ್ಲಿ ಸಕ್ರಿಯರಾಗಿದ್ದರು.
ಏಪ್ರಿಲ್ 8ರಿಂದ ತಬ್ಲಿಘಿ ಜಮಾತ್ ನ ವಿರುದ್ಧ ಅನಂತಕುಮಾರ್ ಹೆಗಡೆ ಅವರು ಬರಹಗಳ ಸರಣಿಯನ್ನು ಶುರು ಮಾಡಿದ್ದರು. ಸುಮಾರು ನಾಲ್ಕು ಸುದೀರ್ಘ ಬರಹಗಳನ್ನು ಅವರು ಕೊರೋನಾ ವೈರಸ್ ಎಂಬ ಜಿಹಾದ್ ಅನ್ನು ತಬ್ಲಿಘಿಗಳು ಹರಡುತ್ತಿದ್ದಾರೆ ಎಂಬಿತ್ಯಾದಿ ಅರ್ಥದಲ್ಲಿ ಪ್ರಕಟಿಸಿದ್ದರು. ಇದೇ ಟ್ವೀಟ್ನ್ನು ಉಲ್ಲೇಖಿಸಿ ಟ್ವಿಟ್ಟರ್ ಖಾತೆಯನ್ನು ರದ್ದು ಮಾಡಲಾಗಿದೆ.
ತಮ ಖಾತೆಯನ್ನು ಬ್ಲಾಕ್ ಮಾಡುತ್ತಿದ್ದಂತೆ ಸಂಸದ ಅನಂತಕುಮಾರ್ ಹೆಗಡೆ ಟ್ವಿಟ್ಟರ್ ವಿರುದ್ಧ ಕಿಡಿಕಾರಿದ್ದಾರೆ. ಟ್ವಿಟ್ಟರ್ ಭಾರತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಭಾರತದ ವಿರುದ್ಧ ಷಡ್ಯಂತರ ಹಾಗೂ ಭಾರತವನ್ನು ಒಡೆಯುವ ಟ್ವೀಟ್ ಗಳನ್ನು ಪ್ರಚಾರ ಮಾಡುವ ಉದ್ಯಮವನ್ನು ಟ್ವಿಟ್ಟರ್ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಕೆಲವು ದಿನಗಳ ಹಿಂದೆ ಗುರುಪಟವಂತ ಸಿಂಘ್ ಪನ್ನೂನ್ ಎಂಬ ಟ್ವಿಟ್ಟರ್ ಖಾತೆಯಿಂದ ಪಂಜಾಬ್ ರಾಜ್ಯವನ್ನು ಭಾರತದಿಂದ ಸ್ವಾತಂತ್ರಗೊಳಿಸಿ, ಖಲಿಸ್ಥಾನ ಎಂಬ ಪ್ರತ್ಯೇಕ ರಾಷ್ಟ್ರವನ್ನಾಗಿಸುವುದರ ಬಗ್ಗೆ ಟ್ವೀಟ್ ಮಾಡಿದ್ದು, ಅದನ್ನು ಟ್ವಿಟ್ಟರಿಗೆ ಹಣಪಾವತಿಸಿ ಜಾಹಿರಾತು ನೀಡಿದ್ದಾರೆ. ಇದು ಭಾರತದ ವಿರುದ್ಧ ನಡೆಸುತ್ತಿರುವ ಜಾಹೀರಾತಾಗಿದ್ದು, ಇದನ್ನು ಟ್ವಿಟ್ಟರ್ ಅನುಮೋದಿಸಿ ಜಾಹೀರಾತನ್ನು ಪ್ರಚಾರ ಪಡೆಸಿದೆ. ಇಂತಹ ರಾಷ್ಟ್ರವಿರೋಧ ಚಟುವಟಿಕೆಯನ್ನು ಬಯಲು ಮಾಡಿ, ಪ್ರಧಾನಿ ಹಾಗೂ ಗೃಹ ಸಚಿವರ ಗಮನಕ್ಕೆ ನಾನು ತಂದಿದ್ದರ ಪರಿಣಾಮವಾಗಿ, ಏಪ್ರಿಲ್ 22ರಂದು ತಬ್ಲಿಘಿ ಜಮಾತ್ ನ ವಿರುದ್ಧ ನಾನು ಮಾಡಿರುವ ಟ್ವೀಟಿನ ನೆಪವಿಟ್ಟುಕೊಂಡು ನನ್ನ ಟ್ವಿಟ್ಟರ್ ಖಾತೆಯನ್ನು ರದ್ದು ಮಾಡಿದ್ದಾರೆ. ಬದಲಾಗಿ ನಾನು ಮಾಡಿರುವ ಟ್ವೀಟ್ ನ್ನು ತಗೆದುಹಾಕಿದಲ್ಲಿ ನನ್ನ ಖಾತೆಯಬನ್ನು ಪುನಃ ಸಕ್ರಿಯಗೊಳಿಸುವುದಾಗಿ ಹೇಳಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.
ದೇಶದ ವಿರುದ್ಧ ನಡೆಯುವ ಯಾವುದೇ ನಡೆಯನ್ನು ಅದು ಯಾರೇ ಇರಲಿ, ನನ್ನ ವಿರೋಧವನ್ನು ನಾನು ವ್ಯಕ್ತಪಡಿಸುತ್ತಾ ಬಂದಿದ್ದೇನೆ. ಇದರಲ್ಲಿ ಯಾವುದೇ ರಾಜಿ ಇಲ್ಲಾ. ಈ ನಿಟ್ಟಿನಲ್ಲಿ ನಾನು ಮಾಡಿರುವ ಟ್ವೀಟನ್ನು ಅಳಿಸುವ ಪ್ರಶ್ನೆಯೇ ಇಲ್ಲ. ಅದರಲ್ಲಿ ಟ್ವಿಟ್ಟರ್ ನಡೆಸುತ್ತಿರುವ ಭಾರತ ವಿರೋಧಿ ಪ್ರಚಾರಗಳನ್ನು ನಾನು ಅತ್ಯಂತ ತೀವ್ರವಾಗಿ ಖಂಡಿಸುತ್ತೇನೆ. ದೇಶ ವಿರೋಧಿ ಸಾಮಾಜಿಕ ಜಾಲತಾಣದ ಅಕೌಂಟಿಗಿಂತ ನನ್ನ ದೇಶ, ನನ್ನ ಸಿದ್ಧಾಂತ ನನ್ನ ಜೀವನದ ಆದ್ಯತೆ’ ಎಂದು ಅವರು ತಮ್ಮ ಅಧಿಕೃತ ಖಾತೆ ಫೇಸ್ ಬುಕ್ ನಲ್ಲಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.