ವಿಜಯಪುರ: ಇತ್ತೀಚೆಗೆ ಮತಾಂತರ ಮಾಡಿಸಿಕೊಂಡು ಜಿಹಾದ್ ಕೆಲಸಗಳನ್ನು ಮಾಡಿಸುತ್ತಿರುವ ಆರೋಪಗಳು ಒಂದಲ್ಲ ಒಂದುಕಡೆ ಕೇಳಿ ಬರುತ್ತಲೇ ಇವೆ. ಇದೀಗ ಇದಕ್ಕೆ ಪುಷ್ಠಿ ನೀಡುವಂತೆ ವಿಜಯಪುರದಲ್ಲೊಂದು ಪ್ರಕರಣ ಬೆಳಕಿಗೆ ಬಂದಿದೆ.
ವಿಜಯಪುರ ಜಿಲ್ಲೆ ಇಂಡಿ ಪಟ್ಟಣದ ನಿವಾಸಿ ಲಕ್ಷ್ಮಿಕಾಂತನನ್ನು ಮುಸ್ಲಿಂ ಮೌಲ್ವಿಗಳು ಮತಾಂತರ ಮಾಡಿದ್ದಾರೆ ಎಂದು ಆತನ ತಂದೆ ಲಕ್ಕಪ್ಪ ಸಿಂಧೆ ಆರೋಪಿಸಿದ್ದಾರೆ. ಮೊದಲಿನಿಂದಲೂ ಲಕ್ಷ್ಮಿಕಾಂತ ಮುಸ್ಲಿಂ ಹುಡುಗರೊಂದಿಗೆ ಓಡಾಡುತ್ತಿದ್ದ. ಆದರೆ ಇದೀಗ ಕಳೆದ ಒಂದು ವಾರದ ಹಿಂದೆ ಆತನನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿಕೊಳ್ಳಲಾಗಿದೆ ಎಂದು ಲಕ್ಕಪ್ಪ ಸಿಂಧೆ ಆತಂಕ ವ್ಯಕ್ತಪಡಿಸಿದ್ದಾರೆ.
ಆರು ದಿನಗಳಿಂದ ಮಗ ಮನೆಗೆ ಬಂದಿಲ್ಲ, ಆತನಿಗೆ ಮುಸ್ಲಿಂ ಧರ್ಮದ ಬಗ್ಗೆ ಹೇಳಿ, ವಶೀಕರಣ ಮಾಡಿಕೊಂಡಿದ್ದಾರೆ. ಆತನಿಗೆ ತಮ್ಮ ಧರ್ಮದ ಬಗ್ಗೆ ತಲೆಯಲ್ಲಿ ತುಂಬಿ ಆತನ ತಲೆ ಕೆಡಿಸಿ ತಮ್ಮ ಧರ್ಮಕ್ಕೆ ಮತಾಂತರ ಮಾಡಿಕೊಂಡಿದ್ದಾರೆ ಎಂದು ಲಕ್ಕಪ್ಪ ಕುಟುಂಬ ಆರೋಪಿಸಿದೆ.
ಇದರಲ್ಲಿ ಮುಖ್ಯವಾಗಿ ಇಂಡಿ ಪಟ್ಟಣದ ಮೌಲ್ವಿ ಸಾಜೀರ್ ಮುಲ್ಲಾ ಅವರದ್ದೆ ಕೈವಾಡ ಇದೆ ಎಂದು ಆರೋಪಿಸಲಾಗಿದೆ. ತಮ್ಮ ಮಗನನ್ನು ಮತಾಂತರ ಮಾಡಿಕೊಂಡಿದ್ದಲ್ಲದೆ ತಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಹಾಕಲಾಗಿದೆ ಎಂದು ಎಸ್.ಪಿ ಅವರಿಗೆ ಲಕ್ಕಪ್ಪ ಸಿಂಧೆ ಕುಟುಂಬಸ್ಥರು ದೂರು ಸಲ್ಲಿಸಿದ್ದಾರೆ.