ರಾಮನಗರ: ಬೊಂಬೆನಗರಿ ಚನ್ನಪಟ್ಟಣದಲ್ಲಿ ನಡೆಯುತ್ತಿರುವ ಹೈಟೆನ್ಷನ್ ಕಾಮಗಾರಿ ಇದೀಗ ವಾಹನ ಸವಾರರಿಗೆ ಪೀಕಲಾಟವನ್ನು ತಂದೊಡ್ಡಿದೆ. ಹೈಟೆನ್ಷನ್ ಕಾಮಗಾರಿ ಹೆಸರಿನಲ್ಲಿ ಚನ್ನಪಟ್ಟಣ-ಸಾತನೂರು ರಸ್ತೆಯಲ್ಲಿ ತೆರೆದಿರುವ ಗುಂಡಿಗಳು ಸಾವಿಗೆ ಆಹ್ವಾನವನ್ನ ನೀಡುತ್ತಿವೆ.
ಚನ್ನಪಟ್ಟಣದ ಸಾತನೂರು ವೃತ್ತದಿಂದ ನೀಲಸಂದ್ರದವರೆಗೂ ಸುಮಾರು 4 ಕಿ.ಮೀನಷ್ಟು ದೂರದವರೆಗೆ ಕೆಪಿಟಿಸಿಎಲ್ ವತಿಯಿಂದ ಹೈಟೆನ್ಷನ್ ವೈರ್ ಕಾಮಗಾರಿ ನಡೆಯುತ್ತಿದೆ. ಆದರೆ, ಈ ಕಾಮಗಾರಿಗೆ ಸಂಬಂಧಿಸಿದಂತೆ ಮುನ್ನೆಚರಿಕಾ ಕ್ರಮವನ್ನು ತೆಗೆದುಕೊಳ್ಳದೇ ಇರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಇದರಿಂದ ವಾಹನ ಸವಾರರು ಬೆಳಗ್ಗೆ ಹಾಗೂ ರಾತ್ರಿ ವೇಳೆ ಸಾಕಷ್ಟು ಆತಂಕದಲ್ಲೇ ವಾಹನ ಚಲಾಯಿಸುತ್ತಿದ್ದಾರೆ.
- Advertisement 2
- Advertisement 3
ಮುಂಜಾಗ್ರತಾ ಕ್ರಮಗಳೇ ಇಲ್ಲ:
ಯಾವುದೇ ಕಾಮಗಾರಿ ನಡೆಯುವುದಾದರೆ ಮುಂಜಾಗ್ರತಾ ಕ್ರಮ ವಹಿಸುವುದು ಅಗತ್ಯ. ಆದರೆ ಹೈಟೆನ್ಷನ್ ಕಾಮಗಾರಿಯಲ್ಲಿ ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನೇ ತೆಗೆದುಕೊಂಡಿಲ್ಲ. ಗುಂಡಿ ತೆಗೆದಿರುವ ಜಾಗದಲ್ಲಿ ಕೇವಲ ಪೊಲೀಸ್ ಬ್ಯಾರಿಕೇಡ್ಗಳನ್ನು ಹಾಕಲಾಗಿದೆ. ಡೈವರ್ಸನ್ ಸೂಚನಾ ಫಲಕ, ರಿಪ್ಲೆಕ್ಟ್ ಸ್ಟಿಕ್ಕರ್ ಬೋರ್ಡ್ ಸೇರಿದಂತೆ ಯಾವೊಂದು ಸೂಚನೆಗಳನ್ನು ಸಹ ಅಳವಡಿಸಿಲ್ಲ. ಹೀಗಾಗಿ, ರಾತ್ರಿ ವೇಳೆಯಲ್ಲಿ ಸಂಚರಿಸುವ ಸವಾರರು ಸ್ವಲ್ಪ ಎಚ್ಚರ ತಪ್ಪಿದರೆ ಈ ಗುಂಡಿಯೊಳಗೆ ಸಮಾಧಿ ಆಗಬೇಕಾಗುತ್ತದೆ.
- Advertisement 4
ಅಷ್ಟೇ ಅಲ್ಲದೆ ಪ್ರವಾಸಿ ತಾಣಗಳಿಗೆ, ಪ್ರಸಿದ್ಧ ದೇವಾಲಯಗಳಿಗೆ ಇದೇ ಮಾರ್ಗವಾಗಿ ಪ್ರವಾಸಿಗರು ತೆರಳುತ್ತಾರೆ. ಸರಿಯಾದ ಮಾಹಿತಿ ತಿಳಿಯದೆ, ರಸ್ತೆಯ ಪರಿಸ್ಥಿತಿ ನೋಡದೆ ಗಾಡಿ ಚಲಾಯಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.