ಜೈಪುರ: ಕಾರ್ಯಕ್ರಮವೊಂದರಲ್ಲಿ ಮೊದಲ ಸಾಲಿನಲ್ಲಿ ಮಹಿಳೆಯರು ಕುಳಿತಿದ್ದ ಕಾರಣಕ್ಕೆ ಪ್ರೇರಕ ಗುರು ಭಾಷಣ ಮಾಡದೇ ಸ್ಥಳದಿಂದ ಹೊರನಡೆದ ವಿಲಕ್ಷಣ ಘಟನೆ ನದೆದಿದೆ.
ರಾಜ್ ಮೆಡಿಕಾನ್ 2019ರ ಕೊನೆಯ ದಿನವಾದ ಭಾನುವಾರದಂದು ದಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ಮತ್ತು ಆಲ್ ರಾಜಸ್ಥಾನ್ ಇನ್ ಸರ್ವಿಸ್ ಡಾಕ್ಟರ್ಸ್ ಅಸೋಸಿಯೇಶನ್ (ಎಆರ್ಐಎಸ್ಡಿಎ) ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ಅಥಿತಿಗಳಾಗಿ ಸ್ವಾಮಿ ಜ್ಞಾನವತ್ಸಲ್ಯ ಅವರನ್ನು ಆಹ್ವಾನಿಸಲಾಗಿತ್ತು.
ಜೈಪುರದ ಬಿರ್ಲಾ ಸಭಾಂಗಣದಲ್ಲಿ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿತ್ತು. ಈ ವೇಳೆ ಸ್ವಾಮಿ ಜ್ಞಾನವತ್ಸಲ್ಯ ಅವರು ಭಾಷಣ ಮಾಡಲು ಬಂದಾಗ, ಮೊದಲ ಮೂರು ಸಾಲಿನಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಕುಳಿತಿದ್ದ ಕಾರಣಕ್ಕೆ ಭಾಷಣ ಮಾಡದೆ ಹಾಗೆಯೇ ಹೊರ ನಡೆದರು. ಪ್ರೇರಕ ಗುರುಗಳು ನಂತರ ಮೊದಲ ಮೂರು ಸಾಲುಗಳಲ್ಲಿ ಯಾವುದೇ ಮಹಿಳೆಯರು ಕುಳಿತುಕೊಳ್ಳುವಂತಿಲ್ಲ ಎಂದು ಘೋಷಿಸಲು ಸಂಘಟಕರನ್ನು ಕೇಳಿಕೊಂಡರು ಎಂದು ಮೂಲಗಳು ತಿಳಿಸಿವೆ.
ಗುರುಗಳ ಈ ವರ್ತನೆ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಮಹಿಳಾ ವೈದ್ಯೆ ಡಾ.ರುತು ಚೌಧರಿ, ಕೆಲವು ಮಹಿಳಾ ವೈದ್ಯರು ಮುಂದಿನ ಸಾಲಿನಲ್ಲಿ ಕುಳಿತಿದ್ದರು. ಮೊದಲ ಮೂರು ಸಾಲುಗಳಲ್ಲಿ ಬಹುತೇಕ ಮಹಿಳೆಯರು ಕುಳಿತು, ಸ್ವಾಮಿ ಜ್ಞಾನವತ್ಸಲ್ ಅವರ ಭಾಷಣ ಕೇಳಲು ಉತ್ಸಾಹದಿಂದ ಕಾಯುತ್ತಿದ್ದರು. ಆಗ ಇದ್ದಕ್ಕಿದ್ದಂತೆ ಮೊದಲ ಏಳು ಸಾಲುಗಳಲ್ಲಿ ಮಹಿಳೆಯರು ಕೂರಬಾರದು ಎಂದು ಘೋಷಿಸಲಾಯಿತು. ಬಳಿಕ ಕೆಲವು ಸಮಯದ ನಂತರ, ಮೊದಲ ಮೂರು ಸಾಲುಗಳಲ್ಲಿ ಯಾವುದೇ ಮಹಿಳೆಯರು ಕುಳಿತುಕೊಳ್ಳಬಾರದು ಎಂದು ಘೋಷಿಸಲಾಯಿತು.
ಯಾಕೆಂದರೆ ಮೊದಲ ಮೂರು ಸಾಲುಗಳಲ್ಲಿ ಯಾವುದೇ ಮಹಿಳೆಗೆ ಕುಳಿತುಕೊಳ್ಳಲು ಅವಕಾಶ ನೀಡದಂತೆ ಸ್ವಾಮಿ ಜ್ಞಾನವತ್ಸಲ್ಯ ಸಂಘಟಕರನ್ನು ಕೇಳಿಕೊಂಡಿದ್ದರು ಎನ್ನಲಾಗಿದ್ದು, ಮಹಿಳಾ ವೈದ್ಯರು ಈ ಆಜ್ಞೆಯ ಹಿಂದಿನ ಕಾರಣವನ್ನು ಕೇಳಿದಾಗ, ಇದು ಸ್ವಾಮಿಜಿಯವರ ಪ್ರೋಟೋಕಾಲ್ ಎಂದು ಅವರಿಗೆ ತಿಳಿಸಲಾಗಿದೆ.
ಗುರುಗಳ ಈ ಷರತ್ತಿನ ಬಗ್ಗೆ ಮಹಿಳಾ ವೈದ್ಯರು ತಿಳಿದಾಗ, ಈ ನಡೆಯನ್ನು ವಿರೋಧಿಸಲು ಪ್ರಾರಂಭಿಸಿದರು. ಅಲ್ಲದೆ ಕೆಲವು ವೈದ್ಯರು ಸೇರಿಕೊಂಡು ಸ್ವಾಮಿ ಜ್ಞಾನವತ್ಸಲ್ಯ ಅವರ ಭಾಷಣವನ್ನು ಬಹಿಷ್ಕರಿಸಲು ನಿರ್ಧರಿಸಿದರು. ಈ ವೇಳೆ ವೈದ್ಯರು ಮತ್ತು ಸಂಘಟಕರ ನಡುವೆ ವಾಗ್ವಾದ ನಡೆದಿದ್ದು, ಬಳಿಕ ಈ ಸಮಸ್ಯೆಗೆ ಪರಿಹಾರ ಕಂಡುಕೊಂಡ ಸಂಘಟಕರು ಮೊದಲ ಎರಡು ಸಾಲುಗಳನ್ನು ಖಾಲಿ ಬಿಡುವಂತೆ ನಿರ್ಧರಿಸಿದರು. ಆ ನಂತರ ಕಾರ್ಯಕ್ರಮ ನಡೆಸಲಾಯಿತು ಎನ್ನಲಾಗಿದೆ.