ಬೆಂಗಳೂರು: ತಾಯಿ ಬುದ್ಧಿವಾದ ಹೇಳಿದ್ದಕ್ಕೆ ಮನೆಯಲ್ಲಿ ನೇಣು ಬಿಗಿದುಕೊಂಡು ಎಂಬಿಎ ಪದವೀಧರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಟಿ.ದಾಸರಹಳ್ಳಿಯಲ್ಲಿ ನಡೆದಿದೆ.
ಅಶ್ವತ್ (22) ಆತ್ಮಹತ್ಯೆ ಮಾಡಿಕೊಂಡ ಯುವಕ. ಅಶ್ವತ್ ತಂದೆ ತಾಯಿ ಮೂಲತಃ ನಂಜನಗೂಡಿನಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿದ್ದರು. ಪೋಷಕರು ಇದ್ದ ಒಬ್ಬ ಮಗನನ್ನು ಕಷ್ಟಪಟ್ಟು ಎಂಬಿಎ ಓದಿಸಿದ್ದರು. ಅಶ್ವತ್ ಇತ್ತೀಚೆಗಷ್ಟೆ ಎಂಬಿಎ ಪದವಿ ಮುಗಿಸಿದ್ದನು. ಆದರೆ ಹುಡುಗರ ಸಹವಾಸಕ್ಕೆ ಬಿದ್ದು ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಇರುತ್ತಿದ್ದನು.
ಓದು ಮುಗಿದ ಮೇಲೂ ಕೆಲಸಕ್ಕೆ ಹೋಗದೆ ಮನೆಯಲ್ಲಿದ್ದೀಯಾ. ಅಲ್ಲದೆ ಹುಡುಗರ ಜೊತೆ ಸೇರಿಕೊಂಡು ಪರೋಡಿ ಬೀಳುತ್ತಿದ್ದೀಯಾ ಕೆಲಸಕ್ಕೆ ಹೋಗು ಎಂದು ತಾಯಿ ಬುದ್ಧಿವಾದ ಹೇಳಿ ಕೆಲಸಕ್ಕೆ ಹೋಗಿದ್ದಾರೆ. ಅಷ್ಟಕ್ಕೆ ಕೋಪಗೊಂಡ ಮಗ ಅಶ್ವತ್, ತಂದೆ-ತಾಯಿ ಇಬ್ಬರು ಕೆಲಸಕ್ಕೆ ಹೋಗಿರುವಾಗ ಮನೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ತಾಯಿ ಕೆಲಸ ಮುಗಿಸಿಕೊಂಡು ಮನೆಗೆ ಬಂದು ನೋಡಿದಾಗ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಅನುಮಾನಗೊಂಡು ಕಿಟಕಿಯಿಂದ ನೋಡಿದಾಗ ಹಾಲಿನಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಒಳಗಡೆ ಹೋಗಿ ನೋಡುವಷ್ಟರಲ್ಲಿ ಅಶ್ವತ್ ಸಾವನ್ನಪ್ಪಿದ್ದನು.
ಈ ಘಟನೆ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಇತ್ತ ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.