ಬೆಂಗಳೂರು: ಅಪಾರ್ಟ್ಮೆಂಟ್ ಮೇಲಿಂದ ಬಿದ್ದು ತಾಯಿ, ಮಗ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯದ ಕಾಡುಗೋಡಿಯ ಬೆಳ್ತೂರಿನಲ್ಲಿ ನಡೆದಿದೆ.
ಯಾದಗಿರಿ ಮೂಲದ ತಾಯಿ ಸುಂದರಮ್ಮ(55) ಹಾಗೂ ಮಗ ಮೌನೇಶ್(36) ಮೃತ ದುದೈರ್ವಿಗಳು. ಮೌನೇಶ್ ಕೆಎಸ್ಆರ್ ಟಿಸಿ ಬಸ್ ಚಾಲಕರಾಗಿದ್ದು, 4 ದಿನದ ಹಿಂದಷ್ಟೇ ಯಾದಗಿರಿಯಿಂದ ಬೆಂಗಳೂರಿಗೆ ಬಂದಿದ್ದರು. ಕಾಡುಗೋಡಿ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿದ್ದ ಚಂದ್ರಪ್ಪ ಎಂಬವರು ವಾಸವಿದ್ದ ಅಪಾರ್ಟ್ಮೆಂಟ್ ಫ್ಲಾಟ್ ಮೇಲಿಂದ ಬಿದ್ದು ಇಂದು ತಾಯಿ-ಮಗ ಸಾವನ್ನಪ್ಪಿದ್ದಾರೆ.
ಇನ್ಸ ಪೆಕ್ಟರ್ ಚಂದ್ರಪ್ಪ ಅವರ ತಂಗಿ ಹಾಗೂ ಮೃತ ಮೌನೇಶ್ ಗೆ ಪ್ರೇಮಾಂಕುರವಾಗಿತ್ತು. ಎರಡು-ಮೂರು ಬಾರಿ ಚಂದ್ರಪ್ಪ ಸಹೋದರಿ ಮೌನೇಶ್ ಜೊತೆ ಮನೆ ಬಿಟ್ಟು ಹೋಗಿದ್ದಳು. ಇದರಿಂದ ಕೋಪಗೊಂಡಿದ್ದ ಚಂದ್ರಪ್ಪ, ಮೌನೇಶ್ ಹಾಗೂ ಅವರ ತಾಯಿಯನ್ನು ತಂದು ಕೂಡಿಹಾಕಿದ್ದರು ಎಂದು ಹೇಳಲಾಗಿದೆ. ಆದರೆ ಇಂದು ಅನುಮಾನಾಸ್ಪದ ರೀತಿಯಲ್ಲಿ ಇಬ್ಬರೂ ಸಾವನ್ನಪ್ಪಿದ್ದಾರೆ.
ಇತ್ತೀಚೆಗೆ ಕಾಡುಗೋಡಿಯಿಂದ ಇನ್ಸ್ ಪೆಕ್ಟರ್ ಚಂದ್ರಪ್ಪ ಅವರ ವರ್ಗಾವಣೆ ಆಗಿತ್ತು. ಸದ್ಯ ಘಟನೆ ಸಂಬಂಧ ಕಾಡುಗೋಡಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ಸ್ ಪೆಕ್ಟರ್ ಚಂದ್ರಪ್ಪ ಅವರನ್ನ ಕರೆಸಿ ಪೊಲೀಸರು ವಿಚಾರಣೆ ಮಾಡಿದ್ದು, ಅವರನ್ನು ಕರೆಸಿ ಮಾತನಾಡಿದ್ದು ನಿಜ. ಆದ್ರೆ ಅವರೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಚಂದ್ರಪ್ಪ ಹೇಳಿದ್ದಾರೆ.