ಬೆಂಗಳೂರು: ಇಂದಿನ ಕಾಲದಲ್ಲಿ ಹೆತ್ತವರು ಮಕ್ಕಳಿಗೆ ಹೊರೆಯಾಗಿ ಬಿಡುತ್ತಾರೆ. ಕೆಲವರು ಪೋಷಕರಿಂದ ಆಸ್ತಿ ಬರೆಸಿಕೊಂಡು ಹೊರ ಹಾಕುವ ಉದಾಹರಣೆಗಳು ನಮ್ಮ ಮುಂದಿವೆ. ಇನ್ನು ಹಲವರು ಪೋಷಕರನ್ನು ನೋಡಿಕೊಳ್ಳಲಾಗದೇ ವೃದ್ಧಾಶ್ರಮಕ್ಕೆ ಸೇರಿಸಿ ಒಂದಿಷ್ಟು ಹಣ ನೀಡಿ ಕೈ ತೊಳೆದುಕೊಳ್ಳುತ್ತಾರೆ. ಬೆಂಗಳೂರಿನಲ್ಲಿರುವ ಉದ್ಯಮಿಯೊಬ್ಬರು ಅಮ್ಮನ ನೆನಪಿಗಾಗಿ 2.5 ಲಕ್ಷ ರೂ. ಖರ್ಚು ಮಾಡಿ ಮೇಣದ ಪ್ರತಿಮೆಯನ್ನ ಮಾಡಿಸಿದ್ದಾರೆ.
ಬೆಂಗಳೂರಿನ ನಿವಾಸಿಯಾಗಿರವ ಉದ್ಯಮಿ ವೆಂಕಟೇಶ್ ತಾಯಿಯ ಪ್ರತಿಮೆ ಮಾಡಿಸುವ ಮೂಲಕ ಪುತ್ರ ಪ್ರೇಮ ಮೆರೆದಿದ್ದಾರೆ. ಒಂದು ವರ್ಷದ ಹಿಂದೆ ವೆಂಕಟೇಶ್ ಅವರ ತಾಯಿ ಮನೋರಾಮ ಅನಾರೋಗ್ಯದಿಂದಾಗಿ ಮೃತಪಟ್ಟಿದ್ದರು. ತಾಯಿಯ ವೈಕುಂಠ ಸಮಾರಾಧನೆ ಕಾರ್ಯಕ್ರಮ ಹಿನ್ನೆಲೆಯಲ್ಲಿ 1,500ಕ್ಕೂ ಹೆಚ್ಚು ಪುರೋಹಿತರನ್ನು ಕರೆಸಿ ಮಂತ್ರ ಪಠಣೆ ಮಾಡಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಒಂದು ಸಾವಿರ ಮುತ್ತೈದೆಯರು ಭಾಗಿಯಾಗಿದ್ದು ಮತ್ತೊಂದು ವಿಶೇಷ.
ಇಷ್ಟಲ್ಲದೇ 2.5 ಲಕ್ಷ ರೂ. ವೆಚ್ಚ ಮಾಡಿ 5 ಅಡಿ ಎತ್ತರದ ಮೇಣದ ಪ್ರತಿಮೆಯನ್ನು ಸಹ ಮಾಡಿಸಿದ್ದಾರೆ. ಮನೋರಮಾ ಅವರು ಧರಿಸುತ್ತಿದ್ದ ಚಿನ್ನದ ಬಳೆ, ಕಾಟನ್ ಸೀರೆ, ನೀಲಿ ಶಾಲು, ಕನ್ನಡಕ, ದಿಂಬು ಸೇರಿದಂತೆ ಅವರೊಂದಿಗೆ ಕಳೆದ ಅವಿಸ್ಮರಣೀಯ ಕ್ಷಣಗಳನ್ನು ಸಾಕ್ಷಚಿತ್ರದ ಮೂಲಕ ಸೆರೆ ಹಿಡಿದಿದ್ದಾರೆ. ವೆಂಕಟೇಶ್ ಅವರ ಪುತ್ರ ಪ್ರೇಮಕ್ಕೆ ಕುಟುಂಬಸ್ಥರು ಮತ್ತು ಸ್ನೇಹಿತ ವರ್ಗ ಮೆಚ್ಚುಗೆ ಸೂಚಿಸಿದ್ದಾರೆ.