ಬೆಂಗಳೂರು: ಹೆತ್ತ ಮಕ್ಕಳು ಪ್ರತಿಷ್ಠಿತ ಸರ್ಕಾರಿ ಹುದ್ದೆಯಲ್ಲಿದ್ದರೂ ಅವರ ನಿರ್ಲಕ್ಷಕ್ಕೊಳಗಾಗಿ ವೃದ್ಧೆಯೊಬ್ಬರು ಬೀದಿಗೆ ಬಿದ್ದಿರೋ ಮನಕಲುಕುವ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ನಡೆದಿದೆ.
ಜಯಮ್ಮ ಎಂಬವರೇ ಬೀದಿಗೆ ಬಿದ್ದಿರುವ ವೃದ್ಧೆ. ಇಂದು ಬೆಳಿಗ್ಗೆ ಜಯಮ್ಮ ನಂದಿನಿಲೇಔಟ್ ನಿಂದ ಬ್ಯಾಡರಹಳ್ಳಿಗೆ ಬಂದು ಅಂಗಡಿಯೊಂದರ ಮುಂದೆ ಬಿಸಿಲಿನಲ್ಲೇ ಕೂತಿದ್ದರು. ಇದನ್ನ ಗಮನಿಸಿದ ಸ್ಥಳೀಯರು ಜಯಮ್ಮರ ಹಿನ್ನೆಲೆ ವಿಚಾರಿಸಿದ್ರು. ಆಗ ಜಯಮ್ಮ ಮೂಲತಃ ಅರಸಿಕೆರೆಯವರಾಗಿದ್ದು, ಇವರಿಗೆ ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳು ಸೇರಿ ಒಟ್ಟು ನಾಲ್ಕು ಜನ ಮಕ್ಕಳಿರೋ ವಿಷಯ ಗೊತ್ತಾಗಿದೆ.
ವೃದ್ಧೆ ಜಯಮ್ಮ ಅವರ ಓರ್ವ ಗಂಡು ಮಗ ಬಿಇಎಲ್ನಲ್ಲಿ ಹಾಗೂ ಮತ್ತೊಬ್ಬ ಮಗ ಹೆಚ್ಎಎಲ್ ನಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಕಿರಿಯ ಮಗಳು ವಿಧಾನಸೌಧದಲ್ಲಿ ಕೆಲಸ ಮಾಡುತ್ತಿದ್ದಾರೆ. ಗಂಡು ಮಕ್ಕಳ ನಿಲಕ್ಷ್ರ್ಯದಿಂದ ಕಂಗಾಲಾಗಿದ್ದ ಜಯಮ್ಮ ತಮ್ಮ ಹಿರಿಯ ಮಗಳ ಮನೆಯಲ್ಲಿ ಆಶ್ರಯ ಪಡೆದಿದ್ದರು. ಇತ್ತೀಚೆಗೆ ಅವರು ತೀರಿಹೋದ ಬಳಿಕ, ಆಶ್ರಯ ನೀಡುವಂತೆ ತಮ್ಮ ಉಳಿದ ಮಕ್ಕಳ ಬಳಿ ಕೇಳಿಕೊಂಡ್ರೂ ಯಾರೊಬ್ಬರು ಜಯಮ್ಮರನ್ನು ಜೋಪಾನ ಮಾಡುವ ಮನಸ್ಸು ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಜಯಮ್ಮ ಕಾಲುನಡಿಗೆಯಲ್ಲೇ ಊರುರು ತಿರುಗುತ್ತಾ ಬೀದಿಯಲ್ಲೇ ಕಾಲಕಳೆಯುತ್ತಿದ್ದಾರೆ.
ಇನ್ನಾದ್ರೂ ಅವರ ಮಕ್ಕಳು ಇಳಿವಯಸ್ಸಿನಲ್ಲಿರುವ ಜಯಮ್ಮರ ಆರೈಕೆ ಮಾಡುವ ಮನಸ್ಸು ಮಾಡಬೇಕಿದೆ.