ವಿಜಯಪುರ: 4 ತಿಂಗಳ ಪುಟ್ಟ ಕಂದಮ್ಮನನ್ನು ಕಟುಕ ತಾಯಿಯೊಬ್ಬಳು ರಸ್ತೆ ಪಕ್ಕದಲ್ಲೇ ಬಿಟ್ಟು ಹೋಗಿರುವ ಅಮಾನವೀಯ ಘಟನೆ ಜಿಲ್ಲೆಯ ಚಡಚಣ ತಾಲೂಕಿನ ಗೋಡ್ಯಾಳ್-ಬರಡೋಲ ಗ್ರಾಮದಲ್ಲಿ ನಡೆದಿದೆ.
ಗೋಡ್ಯಾಳ್-ಬರಡೋಲ ಗ್ರಾಮಗಳ ರಸ್ತೆ ಪಕ್ಕದಲ್ಲಿ ಪುಟ್ಟ ಮಗುವನ್ನು ತಾಯಿ ಬಿಟ್ಟು ಹೋಗಿದ್ದಾಳೆ. ಮಗುವನ್ನು ನೋಡಿದ ಸ್ಥಳೀಯರು ರಕ್ಷಿಸಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಮಗುವನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ.
ಮಗುವನ್ನು ರಸ್ತೆಯಲ್ಲಿ ಬಿಟ್ಟು ಹೋಗಿರುವ ತಾಯಿಗೆ ಸ್ಥಳೀಯರು ಹಿಡಿಶಾಪ ಹಾಕಿದ್ದಾರೆ. ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ತಾಯಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮಗುವನ್ನು ತಾಯಿಯ ಮಡಿಲಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಇತ್ತೀಚೆಗೆ ಹೆಣ್ಣು ಶಿಶುವನ್ನು, ಮಗುವನ್ನು ರಸ್ತೆಗಳಲ್ಲಿ, ಕಸದ ಬುಟ್ಟಿಯಲ್ಲಿ ಹೀಗೆ ಹಲವು ಕಡೆಯಲ್ಲಿ ಹೆತ್ತವರು ಬಿಟ್ಟು ಹೋಗಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಕೆಲವು ಪ್ರಕರಣಗಳಲ್ಲಿ ಪುಟ್ಟ ಕಂದಮ್ಮಗಳು ಬೀದಿನಾಯಿಗೆ ಆಹಾರವಾಗಿದ್ದೂ ಇದೆ.