ಮಕ್ಕಳಿಬ್ಬರನ್ನ ಬಾವಿಗೆ ತಳ್ಳಿ, ತಾನೂ ಹಾರಿದ್ಳು – ಬದುಕಿ ಮೇಲೆ ಬಂದು ತಾಯಿ ನೇಣಿಗೆ ಶರಣು

Public TV
1 Min Read
SUICIDE 1

-ಎಲ್ಲರನ್ನು ನೋಡಿ ವಿಷ ಕುಡಿದ ತಂದೆ

ಹೈದರಾಬಾದ್: ಮಹಿಳೆಯೊಬ್ಬಳು ಪತಿಯ ಮೇಲಿನ ಕೋಪಕ್ಕೆ ತನ್ನ ಇಬ್ಬರು ಮಕ್ಕಳನ್ನು ಬಾವಿಗೆ ತಳ್ಳಿ ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ನಡೆದಿದೆ.

ಈ ಘಟನೆ ಗುಂಟೂರ್ ಜಿಲ್ಲೆಯ ವಿನುಕೊಂಡ ಮಂಡಲ್‍ನ ಗೊಕನಾಕೊಂಡ ಗ್ರಾಮದಲ್ಲಿ ಶುಕ್ರವಾರ ನಡೆದಿದ್ದು, ಮೃತರನ್ನು ನಾರಾಯಣಮ್ಮ (25) ಮಗ ಕೋಟೇಶ್ವರ ರಾವ್ (8) ಮತ್ತು ಮಗಳು ವೆಂಕಟ ಲಕ್ಷ್ಮಿ (3) ಎಂದು ಗುರುತಿಸಲಾಗಿದೆ. ಪತಿ ತನ್ನ ಸಂಪೂರ್ಣ ಕುಟುಂಬ ಸಾವನ್ನಪ್ಪಿರುವುದನ್ನು ಕಂಡು ಆಘಾತಕ್ಕೊಳಗಾಗಿ ಆತನೂ ಸಹ ವಿಷ ಕುಡಿದ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

suicide 2

ನಡೆದಿದ್ದೇನು?
ಪತಿ ವಲ್ಲೇಮ್ ಎಡುಕೊಂಡಲು (30) ಅತಿಯಾಗಿ ಮದ್ಯ ಕುಡಿಯುತ್ತಿದ್ದನು. ಈ ವಿಚಾರವಾಗಿ ಪತ್ನಿ ನಾರಾಯಣಮ್ಮ ಪ್ರತಿದಿನ ಜಗಳ ಮಾಡುತ್ತಿದ್ದಳು. ಕೊನೆಗೆ ಪತಿಯ ಕುಡಿತದ ಚಟಕ್ಕೆ ಬೇಸತ್ತು ನಾರಾಯಣಮ್ಮ ಶುಕ್ರವಾರ ಮುಂಜಾನೆ ತನ್ನ ಮಕ್ಕಳನ್ನು ಮನೆಯ ಸಮೀಪ ಇದ್ದ ಬಾವಿಗೆ ತಳ್ಳಿದ್ದಾಳೆ. ಬಳಿಕ ತಾನೂ ಕೂಡ ಬಾವಿಗೆ ಹಾರಿದ್ದಾಳೆ. ಆದರೆ ಆಕೆ ಬಾವಿಗೆ ಬಿದ್ದರು ಮೃತಪಟ್ಟಿರಲಿಲ್ಲ. ನಂತರ ಬಾವಿಯಿಂದ ಮೇಲೆ ಬಂದು ಮನೆಗೆ ಹೋಗಿ ತನ್ನ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವಿನುಕೊಂಡಾ ಗ್ರಾಮೀಣ ಪೊಲೀಸರು ತಿಳಿಸಿದ್ದಾರೆ.

ನೆರೆಹೊರೆಯವರು ಬಾವಿಯಲ್ಲಿ ಮಕ್ಕಳ ಶವವನ್ನು ಕಂಡು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇತ್ತ ತನ್ನ ಪತ್ನಿ ಮತ್ತು ಮಕ್ಕಳು ಮೃತಪಟ್ಟಿರುವ ಬಗ್ಗೆ ತಿಳಿದು ಆಘಾತಗೊಂಡು ವಲ್ಲೇಮ್ ಎಡುಕೊಂಡಲು ಮನೆಯಲ್ಲಿಯೇ ವಿಷ ಕುಡಿದಿದ್ದಾನೆ. ಅಷ್ಟರಲ್ಲಿ ಸ್ಥಳೀಯರು ನೋಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

suicide 1

ಸದ್ಯಕ್ಕೆ ಎಡುಕೊಂಡಲು ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *