ಬೆಳಗಾವಿ: ಗೃಹಲಕ್ಷ್ಮಿ ಯೋಜನೆಗೆ (Gruhalakshmi Scheme) ಷರತ್ತು ಅನ್ವಯಿಸುತ್ತೆ. ಮನೆಗೆ ಅತ್ತೆಯೇ ಸೀನಿಯರ್, ಆದ್ದರಿಂದ ಗೃಹಲಕ್ಷ್ಮಿ ಯೋಜನೆ ಯಾರಿಗೆ ಬೇಕೆಂದು ಅತ್ತೆಯನ್ನು ಕೇಳುತ್ತೇವೆ. ಅತ್ತೆ ನನ್ನ ಬದಲು ಸೊಸೆಗೆ ಯೋಜನೆ ಕೊಡಿ ಅಂದ್ರೆ `ಗೃಹಲಕ್ಷ್ಮಿ’ ಯೋಜನೆ ಸೊಸೆಗೆ ಸಿಗುತ್ತದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಹೇಳಿದ್ದಾರೆ.
ಗೃಹಲಕ್ಷ್ಮಿ ಗ್ಯಾರಂಟಿ (Congress Guarantee) ಯೋಜನೆ ಜಾರಿ ಸಂಬಂಧ ನಗರದ ಸುವರ್ಣ ಸೌಧದಲ್ಲಿ ಮಾತನಾಡಿದ ಅವರು, ಬಹಳಷ್ಟು ಸರಳವಾಗಿ ಯೋಜನೆ ಜಾರಿಗೆ ತರುವ ಚಿಂತನೆ ಇದೆ. ಇಲಾಖೆ ಮಂತ್ರಿಗಳು ಮತ್ತು ಅಧಿಕಾರಿಗಳ ಸಭೆಯನ್ನು ಸಿಎಂ ಸಿದ್ದರಾಮಯ್ಯ ಕರೆದಿದ್ದಾರೆ. ನಮ್ಮ ಇಲಾಖೆಯ ಜೊತೆ ಆರ್ಡಿಪಿಆರ್, ಕಂದಾಯ ಇಲಾಖೆ ಅಧಿಕಾರಿಗಳ ಸಭೆಯೂ ನಡೆಯಲಿದೆ ಎಂದು ಹೇಳಿದರು. ಇದನ್ನೂ ಓದಿ: ಉಡುಪಿ, ದ.ಕ, ಶಿವಮೊಗ್ಗದಲ್ಲಿ ಖಾಸಗಿ ಬಸ್ಗಳಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಿ: ಸುನಿಲ್ ಕುಮಾರ್
ಈ ವೇಳೆ ಗೃಹಲಕ್ಷ್ಮಿ ಯೋಜನೆಯನ್ನ ಅತ್ತೆಗೆ ಕೊಡಬೇಕೋ? ಸೊಸೆಗೆ ಕೊಡಬೇಕೋ ಎಂಬ ಪ್ರಶ್ನೆಗೆ ದನಿಗೂಡಿಸಿದ ಸಚಿವ ಸತೀಶ್ ಜಾರಕಿಹೊಳಿ (Satish Jarkiholi), ಯಾರಿಗೆ ಕೊಡಬೇಕು ಎಂಬುದಕ್ಕೆ ಷರತ್ತು ಅನ್ವಯವಾಗುತ್ತದೆ. ಅತ್ತೆ ಸ್ವಯಂಪ್ರೇರಿತವಾಗಿ ಸೊಸೆಗೆ ಕೊಡುತ್ತೇನೆ ಅಂದರೆ ಆ ಕಂಡಿಷನ್ ಇಲ್ಲಿ ಅನ್ವಯಿಸುತ್ತೆ. ಗೃಹಲಕ್ಷ್ಮಿ ಯೋಜನೆ ಯಾರಿಗೆ ಬೇಕೆಂದು ಮೊದಲು ಅತ್ತೆಯನ್ನ ಕೇಳುತ್ತೇವೆ. ನನ್ನ ಬದಲು ಸೊಸೆಗೆ ಯೋಜನೆ ನೀಡಿ ಅಂದ್ರೆ ಗೃಹಲಕ್ಷ್ಮಿ ಯೋಜನೆ ಸೊಸೆಗೆ ಕೊಡುತ್ತೇನೆ. ಮೊದಲ ಆದ್ಯತೆಯನ್ನ ಮನೆಯಲ್ಲಿ ಅತ್ತೆಗೆ ಕೊಡುತ್ತೆವೆ. ಅತ್ತೆ ಪ್ರೀತಿಯಿಂದ ಸೊಸೆಗೆ ಕೊಡುವುದಾದರೆ ಕೊಡಲಿ. ಹಾಗೆ ಕೊಡುವುದಾದರೆ ಅತ್ತೆ ಲಿಖಿತ ರೂಪದಲ್ಲಿ ಬರೆದುಕೊಡಬೇಕು ಎಂದಿದ್ದಾರೆ. ಇದನ್ನೂ ಓದಿ: ರಾಜ್ಯದ ಎಲ್ಲ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ – ರಾಮಲಿಂಗಾರೆಡ್ಡಿ ಭರವಸೆ
ಇದಕ್ಕೆ ದನಿಗೂಡಿಸಿದ ಲಕ್ಷ್ಮಿ ಹೆಬ್ಬಾಳ್ಕರ್, ಮನೆಗೆ ಅತ್ತೆಯೇ ಸೀನಿಯರ್, ಹೀಗಾಗಿ ಅತ್ತೆಗೆ ಯೋಜನೆ ಕೊಡುವುದು ನಮ್ಮ ಆದ್ಯತೆ. ನಮ್ಮ ಸಂಸ್ಕೃತಿ ಪ್ರಕಾರ ಮನೆಗೆ ಅತ್ತೆಯೇ ಯಜಮಾನಿ. ಅತ್ತೆಯೇ ಪ್ರೀತಿಯಿಂದ ಸೊಸೆಗೆ ಹಣ ಕೊಡಬೇಕು ಎಂಬುದು ನಮ್ಮ ಆಶಯ ಎಂದು ಹೇಳಿದ್ದಾರೆ.