ಶಿವಮೊಗ್ಗ: ತಾಯಿಯೊಬ್ಬರು ತನ್ನ ಮಗಳ ಮೇಲೆ ಕಣ್ಣಾಕಿದವರ ಮೇಲೆ ಹಲ್ಲೆ ನಡೆಸಲು ಪುಡಿ ರೌಡಿಗಳಿಗೆ ಸುಪಾರಿ ಕೊಟ್ಟ ಘಟನೆ ಶಿವಮೊಗ್ಗ ನಗರದ ಹೊರವಲಯದ ಗೋವಿಂದಪುರ ಗ್ರಾಮದಲ್ಲಿ ನಡೆದಿದೆ.
ಧನಲಕ್ಷ್ಮಿ ಎಂಬವರ ಮಗಳ ಮೇಲೆ ನಿತಿನ್ ಎಂಬಾತ ಕಣ್ಣು ಹಾಕಿದ್ದ. ಆಕೆಯನ್ನು ಲವ್ ಮಾಡುತ್ತಿರುವುದಾಗಿ ಗೆಳೆಯರಿಗೆ ಹೇಳಿಕೊಂಡು ತಿರುಗಾಡುತ್ತಿದ್ದ. ಇದರಿಂದ ರೊಚ್ಚಿಗೆದ್ದ ಧನಲಕ್ಷ್ಮಿ ಪುಡಿ ರೌಡಿ ಸಂತು ಎಂಬಾತನಿಗೆ ಸುಪಾರಿ ಕೊಟ್ಟಿದ್ದಾರೆ. ಅಂತೆಯೇ ಸಂತು ನಿತಿನ್ ಮತ್ತು ಆತನ ಸ್ನೇಹಿತರ ಮೇಲೆ ಚೂರಿಯಂದ ಹಲ್ಲೆ ಮಾಡಿದ್ದಾನೆ.
ಚೂರಿ ಇರಿತದಿಂದ ನಿತಿನ್ ತೀವ್ರವಾಗಿ ಗಾಯಗೊಂಡಿದ್ದಾನೆ. ಈತನ ಸ್ನೇಹಿತರಾದ ರಾಜು, ಪ್ರಜ್ವಲ್, ನವೀನ್ ಎಂಬವರೂ ಕೂಡ ಗಾಯಗೊಂಡಿದ್ದಾರೆ. ಸದ್ಯ ಗಾಯಗೊಂಡ ನಾಲ್ವರು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಹಲ್ಲೆ ನಡೆಸಿದ ಬಳಿಕ ಪುಡಿ ರೌಡಿ ಕುಟ್ಟಿ ಮತ್ತು ಈತನ ಗೆಳೆಯರಾದ ನವೀನ್, ಪ್ರದೀಪ್, ಸಂತು ಎಂಬವರು ಪರಾರಿ ಆಗಿದ್ದಾರೆ. ಈ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.