ಮಂಡ್ಯ: ಅತ್ತೆ ಮೇಲಿನ ಕೋಪಕ್ಕೆ ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳಿಗೆ ವಿಷವಿಕ್ಕಿ ತಾನೂ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ. ತಾಯಿಯ ಕೋಪಕ್ಕೆ ಇಬ್ಬರು ಮಕ್ಕಳಲ್ಲಿ ಒಂದು ಮಗು ಸಾವನ್ನಪ್ಪಿದ್ದು, ಇನ್ನೋರ್ವ ಬಾಲಕನ ಸ್ಥಿತಿ ಗಂಭಿರವಾಗಿದೆ.
ಜಿಲ್ಲೆಯ ಮಳವಳ್ಳಿ ತಾಲೂಕಿನ ದಳವಾಯಿಕೋಡಿಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದಳವಾಯಿಕೋಡಿಹಳ್ಳಿ ಗ್ರಾಮದ ನಿವಾಸಿ ಶಿವಪ್ಪ ಅವರ ಪತ್ನಿ ಸೌಜನ್ಯ(24) ಮಕ್ಕಳಿಗೆ ವಿಷ ಕುಡಿಸಿ, ತಾನೂ ಆತ್ಮಹತ್ಯಗೆ ಯತ್ನಿಸಿದ ತಾಯಿ. ಮೃತಪಟ್ಟ ಮಗುವನ್ನು ಲೋಹಿತ್(1) ಎಂದು ಗುರುತಿಸಲಾಗಿದ್ದು, ಇನ್ನೋರ್ವ ಮಗ ಪುನೀತ್(3) ಸ್ಥಿತಿ ಗಂಭಿರವಾಗಿದೆ.
ಕಳೆದ 6 ವರ್ಷಗಳ ಹಿಂದೆ ಶಿವಪ್ಪ ಸೌಜನ್ಯರನ್ನು ಪ್ರೀತಿ ಮಾಡಿ ಮದುವೆಯಾಗಿದ್ದರು. ಸೌಜನ್ಯಗೆ ಅವರ ಅತ್ತೆ ಮಕ್ಕಳನ್ನು ಮತಾನಾಡಿಸೋದು, ಆಟವಾಡಿಸೋದು ಇಷ್ಟವಾಗುತ್ತಿರಲಿಲ್ಲ. ಇದೇ ಕಾರಣಕ್ಕೆ ಸೌಜನ್ಯ ಹಾಗೂ ಅತ್ತೆ ಮಧ್ಯೆ ಗಲಾಟೆ ನಡೆದಿತ್ತು. ಇದೇ ಸಿಟ್ಟಿನಲ್ಲಿದ್ದ ತಾಯಿ ಬುಧವಾರ ತನ್ನಿಬ್ಬರು ಮಕ್ಕಳಿಗೆ ವಿಷ ಕುಡಿಸಿ, ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ವಿಷ ಸೇವನೆಯಿಂದ ನರಳಾಡುತ್ತಿದ್ದ ಮೂವರನ್ನು ಕುಟುಂಬಸ್ಥರು ತಕ್ಷಣ ಆಸ್ಪತ್ರೆಗೆ ಸೇರಿಸಿದ್ದರು.
ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಲೋಹಿತ್ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾನೆ. ಇತ್ತ ಪುನೀತ್ ಹಾಗೂ ತಾಯಿ ಸ್ಥಿತಿ ಕೂಡ ಗಂಭಿರವಾಗಿದ್ದು ಇಬ್ಬರೂ ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.