ಚಾಮರಾಜನಗರ: ತನ್ನ ಮರಿ ಮೃತಪಟ್ಟಿರುವ ವಿಚಾರವೇ ತಿಳಿಯದ ಆನೆಯೊಂದು ತನ್ನ ಕಂದಮ್ಮನಿಗಾಗಿ ಹುಡುಕಾಟ ನಡೆಸುತ್ತಿರುವ ದೃಶ್ಯ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅರಣ್ಯ ಪ್ರದೇಶದ ಓಂಕಾರ ವಲಯದ ಕಾಡಂಚಿನ ಕುರುಬರಹುಂಡಿಯಲ್ಲಿ ಕಂಡು ಬಂದಿದೆ.
ಜನವರಿ 1 ರಂದು ಭಾನುವಾರ ರಾತ್ರಿ 3 ಆನೆಗಳು ಗ್ರಾಮಕ್ಕೆ ಬಂದಿದ್ದು, ಗ್ರಾಮಸ್ಥರು ಆನೆಗಳನ್ನು ಓಡಿಸಿದ್ದರು. ಈ ವೇಳೆ ಮರಿಯಾನೆ ಅಲ್ಲೇ ಉಳಿದುಕೊಂಡಿತ್ತು. ಒಂದು ತಿಂಗಳ ಆನೆ ಮರಿಯನ್ನು ತಾಯಿ ಆನೆ ಬಿಟ್ಟು ಹೋಗಿತ್ತು. ಮರಿಯಾನೆ ನಿತ್ರಾಣ ಸ್ಥಿತಿಯಲ್ಲಿತ್ತು. ಅದನ್ನು ಕಂಡ ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ನಂತರ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ನಿತ್ರಾಣ ಸ್ಥಿತಿಯಲ್ಲಿದ್ದ ಆನೆ ಮರಿಯನ್ನು ಗ್ರಾಮಸ್ಥರ ಸಹಾಯದಿಂದ ರಕ್ಷಿಸಿದ್ದರು. ಇದನ್ನು ಓದಿ: ತಾಯಿ ಕಳೆದುಕೊಂಡು ಅರಣ್ಯಾಧಿಕಾರಿಗಳ ರಕ್ಷಣೆಯಲ್ಲಿದ್ದ 1 ತಿಂಗ್ಳ ಮರಿ ಆನೆ ಸಾವು!
ಆನೆ ಮರಿಯನ್ನು ತಾಯಿಯ ಜೊತೆ ಸೇರಿಸಲು ಅರಣ್ಯ ಇಲಾಖೆಯ ಸಿಬ್ಬಂದಿ ಪ್ರಯತ್ನಿಸಿದ್ದು, ತಾಯಿ ಆನೆ ತನ್ನ ಮರಿಯನ್ನು ಹುಡುಕಿಕೊಂಡು ಬರುತ್ತದೆಂಬ ಭರವಸೆಯಿಂದ ಸದ್ಯ ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮದ ಬಳಿಯೇ ಆನೆಯನ್ನ ಇರಿಸಿಕೊಂಡಿದ್ದರು. ಆದ್ರೆ ಅವರ ಶ್ರಮ ವ್ಯರ್ಥವಾಗಿದೆ. ತನ್ನ ತಾಯಿ ಮುಖ ನೋಡದೇ ಒಂದು ರಾತ್ರಿ ಕಳೆದ ಮರಿಯಾನೆ ಜನವರಿ 3 ಮಂಗಳವಾರ ಮಧ್ಯಾಹ್ನ ತೀವ್ರ ಜ್ವರದಿಂದ ಮೃತಪಟ್ಟಿತ್ತು.
ತನ್ನ ಮರಿಯನ್ನು ಕಳೆದುಕೊಂಡಿರುವ ತಾಯಿಯಾನೆ ಇದೀಗ ಕಂಗಾಲಾಗಿದ್ದು, ತನ್ನ ಮರಿಗಾಗಿ ಪ್ರತಿ ನಿತ್ಯವೂ ಕಾಡಿನಿಂದ ಈ ಗ್ರಾಮಕ್ಕೆ ಬರುತ್ತಿದೆ. ತನ್ನ ಮರಿ ಸಾವನ್ನಪ್ಪಿರುವ ವಿಚಾರ ತಿಳಿಯದ ತಾಯಿ ಆನೆ ತನ್ನ ಕಂದನಿಗಾಗಿ ಹಂಬಲಿಸುತ್ತಿದೆ. ಗ್ರಾಮಕ್ಕೆ ಪ್ರತಿ ನಿತ್ಯ ಈ ಆನೆ ಬರುತ್ತಿರುವುದರಿಂದ ಗ್ರಾಮಸ್ಥರು ಗಾಬರಿಗೊಂಡು ಆನೆಯನ್ನು ಕಾಡಿಗೆ ಓಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದನ್ನು ಓದಿ: ತಾಯಿ ಆನೆ ಜೊತೆ ಮರಿಯನ್ನ ಸೇರಿಸಲು ಅರಣ್ಯ ಇಲಾಖೆ ಸಿಬ್ಬಂದಿ ಪ್ರಯತ್ನ