ರಾಮನಗರ: ಮರಿಗೆ ಜನ್ಮ ನೀಡಿ ತಾಯಿ ಆನೆ ಕೆರೆಯಲ್ಲಿಯೇ ಸಾವನ್ನಪ್ಪಿರುವ ಘಟನೆ ಕನಕಪುರ ತಾಲೂಕಿನ ಚಿಲಂದವಾಡಿ ಕೆರೆಯಲ್ಲಿ ನಡೆದಿದೆ.
ಭಾನುವಾರ ರಾತ್ರಿ ಬನ್ನೇರುಘಟ್ಟ ಅರಣ್ಯ ಪ್ರದೇಶದಿಂದ ಬಂದಿರುವ ಆನೆಗಳ ಹಿಂಡಿನಲ್ಲಿ ಒಂದು ಗರ್ಭಿಣಿ ಆನೆಯೂ ಬಂದಿದ್ದು, ಆನೆಗೆ ಹೆರಿಗೆ ಬೇನೆ ಕಾಣಿಸಿಕೊಂಡಿದೆ. ಈ ವೇಳೆ ಕೆರೆಗೆ ಇಳಿದಿರುವ ಆನೆ ಮರಿಗೆ ಜನ್ಮ ನೀಡಿದೆ. ನಂತರ ಕೆರೆಯಲ್ಲಿಯೇ ಸಾವನ್ನಪ್ಪಿದೆ.
ಖಾಯಿಲೆಯಿಂದ ಆನೆ ಸಾವನ್ನಪ್ಪಿರುವ ಶಂಕೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಸದ್ಯ ಕೆರೆಯಲ್ಲಿದ್ದ ಆನೆಯ ಮೃತ ದೇಹವನ್ನ ಅರಣ್ಯ ಇಲಾಖೆ ಅಧಿಕಾರಿಗಳು ಜೆಸಿಬಿ ಯಂತ್ರ ಬಳಸಿ ಕೆರೆಯಿಂದ ಹೊರಗೆ ಎಳೆದಿದ್ದಾರೆ.
ಜನ್ಮ ಪಡೆದ ಮರಿಯಾನೆ ಹಿಂಡಾನೆಗಳ ಜೊತೆ ಬನ್ನೇರುಘಟ್ಟ ಅರಣ್ಯಪ್ರದೇಶಕ್ಕೆ ತೆರಳಿದೆ ಎನ್ನಲಾಗಿದೆ. ಆನೆ ಯಾವ ಕಾರಣದಿಂದ ಸಾವನ್ನಪ್ಪಿದೆ ಎಂಬುದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಲು ಮುಂದಾಗಿದ್ದು, ಬನ್ನೇರುಘಟ್ಟ ವೈದ್ಯರ ತಂಡ ಚಿಲಂದವಾಡಿ ಮೀಸಲು ಅರಣ್ಯಕ್ಕೆ ಭೇಟಿ ನೀಡಿದೆ.