ಚಾಮರಾಜನಗರ: ವಿಷ ಪ್ರಸಾದ ದುರಂತ ಪ್ರಕರಣದಲ್ಲಿ ಮೃತಪಟ್ಟಿದ್ದ ತಾಯಿಯ ಅಗಲಿಕೆಯ ನೋವಿನಲ್ಲೇ ಮೂವರು ಮಕ್ಕಳು ಪರೀಕ್ಷೆ ಬರೆದಿದ್ದಾರೆ.
ಹನೂರು ತಾಲೂಕಿನ ಸುಲ್ವಾಡಿ ಮಾರಮ್ಮ ದೇವರ ಪ್ರಸಾದ ಸೇವಿಸಿ ಚಿಕಿತ್ಸೆ ಪಡೆಯುತ್ತಿದ್ದ ಮಗೇಶ್ವರಿ ಭಾನುವಾರ ಮೃತಪಟ್ಟಿದ್ದರು. ತಾಯಿ ಮೃತಪಟ್ಟ ನೋವಿನಲ್ಲೇ ಕಾವ್ಯ, ಕೀರ್ತನಾ ಮತ್ತು ವರುಣ್ ಕೌದಳ್ಳ ಶಾಲೆಯಲ್ಲಿ ಪರೀಕ್ಷೆ ಬರೆದಿದ್ದಾರೆ. ಈ ಮೂಲಕ ತಮ್ಮ ತಾಯಿಯ ಅಗಲಿಕೆಯ ದುಃಖವನ್ನು ಹೊಟ್ಟೆಯಲ್ಲಿ ತುಂಬಿಕೊಂಡು ಅಮ್ಮನ ಆಶಯವನ್ನು ಸಾಕಾರಗೊಳಿಸಲು ಮುಂದಾಗಿದ್ದಾರೆ.
ಸುಳ್ವಾಡಿ ಗ್ರಾಮದ ಮಾರಮ್ಮ ವಿಷ ಪ್ರಸಾದ ಸೇವನೆಯಿಂದ ಜಿಲ್ಲೆಯ ಎಂಜಿ ದೊಡ್ಡಿ ಗ್ರಾಮದ ನಿವಾಸಿ ಮಗೇಶ್ವರಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಇವರಿಗೆ ಮೂವರು ಮಕ್ಕಳಿದ್ದು, ಅವರು ಹನೂರು ತಾಲೂಕಿನ ಕೌಂದಳ್ಳಿಯ ಸೆಂಟ್ ಆಂಥೋಣಿ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಹಿರಿಯ ಮಗಳು ಕಾವ್ಯ 9ನೇ, ಎರಡನೇ ಮಗಳು ಕೀರ್ತನಾ 8ನೇ ಹಾಗೂ ಮಗ ವರುಣ್ 5ನೇ ತರಗತಿಯಲ್ಲಿ ಓದುತ್ತಿದ್ದಾರೆ.
ಮೃತ ಮಗೇಶ್ವರಿ ಅವರು ಮೊದಲನೇ ಮಗಳಾದ ಕಾವ್ಯಳನ್ನು ಉಪನ್ಯಾಸಕಿಯಾಗಿ ಮತ್ತು ಎರಡನೇ ಮಗಳು ಕೀರ್ತಳಾನ್ನು ಪೊಲೀಸ್ ಮಾಡುವ ಆಸೆ ಹೊಂದಿದ್ದರು. ಕೂಲಿ ಮಾಡಿದರೂ ಮಕ್ಕಳನ್ನು ಖಾಸಗಿ ವಿದ್ಯಾ ಸಂಸ್ಥೆಯಲ್ಲಿ ಓದಿಸುತ್ತಿದ್ದರು.
ತಾಯಿ ಕಳೆದುಕೊಂಡರೂ ಮಾರನೇ ದಿನವೇ ಮಕ್ಕಳು ತರಗತಿಗೆ ಬಂದು ಪರೀಕ್ಷೆ ಬರೆದಿದ್ದಾರೆ. ಈ ಮೂಲಕ ತಾಯಿ ಮಗೇಶ್ವರಿಯ ಆಸೆಯನ್ನು ಪೂರೈಸುವಂತಹ ಕೆಲಸವನ್ನು ಮಕ್ಕಳು ಮಾಡಿದ್ದಾರೆ. ಅಷ್ಟೇ ಅಲ್ಲದೇ ತಾಯಿ ಕಂಡಿದ್ದ ಕನಸನ್ನು ನನಸಾಗಿಸಿದರೆ ಅವರು ಸದಾ ನಮ್ಮ ಜೊತೆಯಲ್ಲಿಯೇ ಇರುತ್ತಾರೆ ಎಂಬ ಭಾವನೆಯ ಛಲದಿಂದ ಓದುತ್ತಿದ್ದಾರೆ. ಮಕ್ಕಳು ಈ ಕಾರ್ಯ ಇತರರಿಗೆ ಮಾದರಿಯಾಗಿದ್ದು, ಅವರ ಛಲ ಕಂಡು ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಹೆಮ್ಮೆ ಪಟ್ಟಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv