ಹೈದರಾಬಾದ್: ಗೋದಾವರಿ ನದಿಗೆ ಹಾರಿ ತಾಯಿ- ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಕರೀಮ್ ನಗರ ಜಿಲ್ಲೆಯಲ್ಲಿ ನಡೆದಿದೆ.
ರಾಮ್ಬಾಯಿ (41) ಮತ್ತು ಪಾರಿಜಾತ (22) ಆತ್ಮಹತ್ಯೆಗೆ ಶರಣಾದ ತಾಯಿ-ಮಗಳು. ಇವರು ಜೇಟ್ಲಿಯ ಜಿಲ್ಲೆಯ ಗೋದಾವರಿ ನದಿಗೆ ಹಾರಿ ಆತ್ಯಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಇತ್ತೀಚೆಗೆ ರಾಮ್ಬಾಯಿಯ ಪತಿ ಸತ್ಯಯ್ಯ ಸಿಂಗಪೂರ್ ನಿಂದ ಹಿಂದಿರುಗಿದ್ದರು. ಆದರೆ ಪತಿ ಮರಳಿ ಬಂದ ನಂತರ ಪ್ರತಿದಿನ ಹಣಕಾಸಿನ ವಿಚಾರದ ಬಗ್ಗೆ ಜಗಳ ನಡೆಯುತ್ತಿತ್ತು. ಇದರಿಂದ ತಾಯಿ ರಾಮ್ಬಾಯಿ ಮತ್ತು ಮಗಳು ಪಾರಿಜಾತ ಬೇಸರಗೊಂಡಿದ್ದರು.
ಮಂಗಳವಾರ ಬೇಸರಗೊಂಡಿದ್ದ ತಾಯಿ ಮತ್ತು ಮಗಳು ರಾಯಪಟ್ನಮ್ ಸೇತುವೆಯ ಬಳಿ ಗೋದಾವರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರು ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಹೋಗಿ ನದಿಯಿಂದ ಮೃತ ದೇಹಗಳನ್ನು ಹೊರತೆಗೆದಿದ್ದು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.