ಹಾವೇರಿ: ಇತ್ತೀಚಿನ ದಿನಗಳಲ್ಲಿ ಆಗತಾನೇ ಜನಿಸಿದ ಕಂದಮ್ಮಗಳನ್ನ ಚರಂಡಿಗಳಲ್ಲಿ ಎಸೆದು ಹೋಗುವ ಘಟನೆಗಳನ್ನ ನಾವು ನೋಡಿದ್ದೇವೆ ಮತ್ತು ಕೇಳಿದ್ದೇವೆ. ಆದರೆ ಮೂಕಪ್ರಾಣಿ ಹಸುವೊಂದು ಚಿಕಿತ್ಸೆಗಾಗಿ ಸ್ಥಳೀಯರು ತನ್ನ ಕರುವನ್ನು ಕರೆದೊಯ್ಯುತ್ತಿದ್ದಾಗ ಅವರನ್ನೇ ಹಿಂಬಾಲಿಸಿದ ಮನಕಲಕುವ ಮತ್ತೊಂದು ಘಟನೆ ಹಾವೇರಿಯಲ್ಲಿ ನಡೆದಿದೆ.
ಬುಧವಾರ ರಾತ್ರಿ ಹಾವೇರಿ ನಗರದ ವಿದ್ಯಾನಗರದ ಪ್ರಜ್ವಲ್ ಬೇಕರಿ ಬಳಿ ಈ ಘಟನೆ ನಡೆದಿದೆ. ಬಿಡಾಡಿ ಆಕಳಿನ ತಾಯಿ ಹೃದಯ ಪ್ರೀತಿ ಕಂಡು ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕರು ಕಾಲು ನೋವಿನಿಂದ ನಿತ್ರಾಣಗೊಂಡು ಬಿದ್ದು ಹೊರಳಾಡುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯರು ಕರುವಿಗೆ ಹಾಲು ಕುಡಿಸಿ ಚಿಕಿತ್ಸೆಗಾಗಿ ಸಾಗಿಸಿದ್ದಾರೆ. ಈ ವೇಳೆ ಅದರ ತಾಯಿ ಜನರನ್ನೇ ಹಿಂಬಾಲಿಸಿಕೊಂಡು ಓಡಿದೆ. ಇದನ್ನು ಓದಿ: ಚಿಕಿತ್ಸೆಗಾಗಿ ಕರುವನ್ನು ವಾಹನದಲ್ಲಿ ಕರೆದೊಯ್ದರೆ, ಆಸ್ಪತ್ರೆವರೆಗೂ ಓಡೋಡಿ ಬಂತು ತಾಯಿ ಹಸು
ಏಳೆಂಟು ದಿನಗಳ ಹಿಂದೆ ಆಕಳು ಹೆಣ್ಣು ಕರುವಿಗೆ ಜನ್ಮ ನೀಡಿದೆ. ಇದೀಗ ಕರುವಿನ ಕಾಲಿಗೆ ಗಾಯವಾಗಿ ನಿತ್ರಾಣಗೊಂಡು ಬಿದ್ದಿದೆ. ಸದ್ಯ ಸ್ಥಳೀಯರು ಕರುವಿಗೆ ಹಾಲು ಕುಡಿಸಿ, ಚಿಕಿತ್ಸೆ ನೀಡಿ ವಾರ್ತಾ ಇಲಾಖೆ ಆವರಣದಲ್ಲಿ ಬಿಟ್ಟು ಹೋಗಿದ್ದಾರೆ. ಬಿಡಾಡಿ ಆಕಳಿನ ತಾಯಿ ಹೃದಯದ ಪ್ರೀತಿ ಕಂಡು ಸ್ಥಳೀಯ ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಇದೇ ಜಿಲ್ಲೆಯ ಜೆ.ಪಿ ವೃತ್ತದ ಬಳಿ ಇಂಥದ್ದೇ ಒಂದು ಘಟನೆ ನಡೆದಿದ್ದು, ತಾಯಿ ಆಕಳಿನ ವೇದನೆ ಸ್ಥಳೀಯರಲ್ಲಿ ಕಣ್ಣೀರು ತರಿಸಿತ್ತು.