ಹಾಸನ: ಕುಡಿದ ಮತ್ತಿನಲ್ಲಿ ಲಾರಿ ಚಲಾಯಿಸಿ ಸರಣಿ ಅಪಘಾತ ಮಾಡಿದ ಚಾಲಕನಿಂದಾಗಿ ಇಬ್ಬರು ಮಕ್ಕಳ ಸಹಿತ ತಾಯಿ ದುರ್ಮರಣಕ್ಕೀಡಾಗಿದ್ದಾರೆ.
ಹಾಸನ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಪ್ರಣತಿ (3), ಪ್ರಣವ್(3) ಮತ್ತು ಜ್ಯೋತಿ ಮೃತರು. ಪ್ರಣತಿ, ಪ್ರಣವ್ ಇಬ್ಬರೂ ಅವಳಿ ಮಕ್ಕಳಾಗಿದ್ದಾರೆ. ತಂದೆ ಶಿವಾನಂದ್ ಹಾಗೂ ತಾಯಿ ಜ್ಯೋತಿ ಜೊತೆ ಮಕ್ಕಳು ಬೈಕಿನಲ್ಲಿ ಹೋಗುತ್ತಿದ್ದರು. ಈ ವೇಳೆ ಸುಮಾರು ನಾಲ್ಕು ಬೈಕ್ ಗಳಿಗೆ ಡಿಕ್ಕಿ ಹೊಡೆದ ಲಾರಿ ಚಾಲಕ, ಎರಡು ಪುಟ್ಟ ಮಕ್ಕಳಿದ್ದ ಬೈಕ್ಗೂ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಮಕ್ಕಳಿಬ್ಬರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ತಾಯಿ ಕೂಡ ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡಿರುವ ಮಕ್ಕಳ ತಂದೆ ಶಿವಾನಂದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕುಡಿದ ಮತ್ತಿನಲ್ಲಿ ಮನಬಂದಂತೆ ಲಾರಿ ಚಲಾಯಿಸಿದ ಚಾಲಕ, ಅಪಘಾತದ ನಂತರವೂ ಲಾರಿ ನಿಲ್ಲಿಸದೆ ವೇಗವಾಗಿ ಹೋಗಿದ್ದಾನೆ. ಇದರಿಂದ ಸುಮಾರು ಎರಡು ಕಿಲೋಮೀಟರ್ ದೂರದವರೆಗೂ ಬೈಕ್ ಅನ್ನು ಲಾರಿ ಎಳೆದುಕೊಂಡು ಹೋಗಿದೆ. ಇದರಿಂದ ಲಾರಿಯ ಟಯರ್ ನಡಿ ಸಿಲುಕಿ ಸುಮಾರು ಎರಡು ಕಿಲೋಮೀಟರ್ ದೂರದವರೆಗೂ ಸಾಗಿದ ಮಗುವಿನ ದೇಹ ಛಿದ್ರಛಿದ್ರವಾಗಿದೆ. ಘಟನೆಯಿಂದ ಪೋಷಕರು, ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ.
ಹಾಸನ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.