ಮಂಡ್ಯ: ಮಗಳನ್ನು ಮದುವೆ ಮಾಡಿಕೊಡುವಂತೆ ವ್ಯಕ್ತಿಯೊಬ್ಬ ಬೆದರಿಕೆ ಹಾಕಿದ್ದಕ್ಕೆ ಮನನೊಂದು ತಾಯಿ ಮತ್ತು ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ (Mandya) ಜಿಲ್ಲೆಯಲ್ಲಿ ನಡೆದಿದೆ.
19 ವರ್ಷದ ಪ್ರಿಯಾಂಕಾ ಮತ್ತು ಆಕೆಯ ತಾಯಿ ಶಕುಂತಲಾದೇವಿ ಆತ್ಮಹತ್ಯೆಗೆ ಶರಣಾದವರು. ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪ್ರಿಯಾಂಕಾ ಯುವತಿ ಮೂರು ಮಕ್ಕಳ ತಂದೆಯೊಬ್ಬನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಳು. ಈ ವಿಚಾರ ಆಕೆಯ ಕುಟುಂಬಸ್ಥರಿಗೆ ತಿಳಿದು, ಯುವತಿಗೆ ಬಿದ್ದಿಮಾತು ಹೇಳಿದ್ದಾರೆ. ಈ ನಡುವೆ ಯುವತಿಗೆ ಬೇರೆಯವರ ಜೊತೆ ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದರು. ಈ ವಿಚಾರ ತಿಳಿದು ಮೂರು ಮಕ್ಕಳ ತಂದೆ ಮುತ್ತುರಾಜ್ ಗಲಾಟೆ ಮಾಡಿದ್ದಾನೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಲ್ಯಾಂಬೋರ್ಗಿನಿ ಚಲಾಯಿಸಿ ಜನರು, ವಾಹನಗಳಿಗೆ ಗುದ್ದಿದ ತಂಬಾಕು ಉದ್ಯಮಿ ಪುತ್ರ
ಯುವತಿಯನ್ನು ನನಗೆ ಮದುವೆ ಮಾಡಿಕೊಡಿ ಎಂದು ಬಲವಂತ ಮಾಡಿದ. ಮದುವೆ ಮಾಡಿಕೊಡದಿದ್ದರೆ ಕೊಲೆ ಮಾಡುವುದಾಗಿ ಹೆದರಿಸಿದ್ದ ಎನ್ನಲಾಗಿದೆ. ಕೊನೆಗೆ ಮುತ್ತುರಾಜ್ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ್ದ. ಅತ್ತ ಪ್ರಿಯಾಂಕಾ ತಂದೆ ಇನ್ನು ತಡ ಮಾಡೋದು ಬೇಡ ಅಂತ ತರಾತುರಿಯಲ್ಲಿ ಮಗಳಿಗೆ ಸಂಬಂಧವೊಂದನ್ನ ನಿಶ್ಚಯ ಮಾಡಲು ತಯಾರಿ ನಡೆಸಿದ್ದರು. ಆದರೆ, ಈ ನಡುವೆ ಪ್ರಿಯಾಂಕಾ ಮತ್ತು ಈಕೆಯ ತಾಯಿ ಶಕುಂತಲಾ ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಾರೆ.
ಸದ್ಯ ಪ್ರಿಯಾಂಕಾ ಹಾಗೂ ಶಕುಂತಲಾ ಮರಣೋತ್ತರ ಪರೀಕ್ಷೆಯನ್ನು ಮಂಡ್ಯ ಮಿಮ್ಸ್ನಲ್ಲಿ ನಡೆಸಿ ಮೃತದೇಹಗಳನ್ನ ಪೋಷಕರಿಗೆ ಹಸ್ತಾಂತರಿಸಲಾಗಿದೆ. ಮಗಳು ಮತ್ತು ಹೆಂಡತಿ ಸಾವಿನ ಬಳಿಕ ಮಹೇಶ್ ಹಲಗೂರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಲವ್ವರ್ಗೆ ತಾಯಿ, ದೊಡ್ಡಮ್ಮನ ಖಾಸಗಿ ಫೋಟೋ ರವಾನೆ – ಪುತ್ರಿಯ ಫೋನ್ ನೋಡಿ ಶಾಕ್

