ಕೊಪ್ಪಳ: ಅನಾರೋಗ್ಯದಿಂದ ಮೃತಪಟ್ಟ ಮಗಳ ಸಾವಿನ ಸುದ್ದಿ ಕೇಳಿ ತಾಯಿಗೆ ಹೃದಯಾಘಾತವಾಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಕುಕನೂರು ತಾಲೂಕು ಬೆಣಕಲ್ ಗ್ರಾಮದಲ್ಲಿ ನಡೆದಿದೆ.
ಬೆಣಕಲ್ ಗ್ರಾಮದ ಈರಮ್ಮ ಹೊಟ್ಟಿ(55) ಮತ್ತು ತಾಯಿ ಹುಚ್ಚಮ್ಮ(85) ಮೃತ ದುರ್ದೈವಿಗಳು. ತಾಯಿ ಹುಚ್ಚಮ್ಮಳೊಂದಿಗೆ ವಾಸವಾಗಿದ್ದ ಮಗಳು ಈರಮ್ಮ ಅನಾರೋಗ್ಯಕ್ಕೀಡಾಗಿದ್ದರು. ಹೀಗಾಗಿ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೆ ಈರಮ್ಮ ಶುಕ್ರವಾರ ಸಂಜೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಶವವನ್ನು ಮನೆಗೆ ತಂದಾಗ ಮಗಳು ಸಾವನ್ನಪ್ಪಿರುವ ಸುದ್ದಿಯನ್ನು ಕೇಳಿದ ವೃದ್ಧೆ ಹುಚ್ಚಮ್ಮರಿಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. ಅನ್ಯೋನ್ಯವಾಗಿದ್ದ ತಾಯಿ-ಮಗಳು ಸಾವಿನಲ್ಲೂ ಒಂದಾಗಿದ್ದಾರೆ.
ತಾಯಿ-ಮಗಳ ಸಾವಿನಿಂದ ಗ್ರಾಮದಲ್ಲಿ ಅವರ ನಡುವಿನ ಬಾಂಧವ್ಯದ ಬಗ್ಗೆ ಮಾತನಾಡಿಕೊಂಡು ಕಣ್ಣೀರು ಹಾಕಿದ್ದಾರೆ.