ಉಡುಪಿ: ಮೂವರು ಮಕ್ಕಳು ಸೇರಿದಂತೆ ನಾಲ್ವರ ಬರ್ಬರ ಹತ್ಯೆ ಪ್ರಕರಣದ ತನಿಖೆಯಲ್ಲಿ ಪೊಲೀಸರು (Police) ಮಹತ್ವದ ಘಟ್ಟ ತಲುಪಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಹಾಗೂ ಫೋನ್ ಕರೆಗಳ ದಾಖಲೆಗಳ ಆಧಾರದ ಮೇಲೆ ಮಹಾರಾಷ್ಟ್ರದ (Maharashtra) ಸಾಂಗ್ಲಿ ಮೂಲದ ಓರ್ವ ವ್ಯಕ್ತಿ ಮೇಲೆ ಹೆಚ್ಚಿನ ಅನುಮಾನವಿದ್ದು ಆತನನ್ನು ಬೆಳಗಾವಿಯಲ್ಲಿ ವಶಕ್ಕೆ ಪಡೆದು ಉಡುಪಿಗೆ (Udupi) ಕರೆ ತರಲಾಗುತ್ತಿದೆ.
ವಶಕ್ಕೆ ಪಡೆದ ಶಂಕಿತನನ್ನು ಪ್ರವೀಣ್ ಅರುಣ್ ಚೌಗಲೆ ಎಂದು ಗುರುತಿಸಲಾಗಿದೆ. ಆತನ ಚಹರೆ, ಎತ್ತರ ಮತ್ತು ಫೋನ್ ಲೊಕೇಶನ್ ಹೊಂದಿಕೆಯಾಗಿದೆ. ಇದರಿಂದ ಆತನನ್ನು ಪೊಲೀಸರು ವಶಕ್ಕೆ ಪಡೆದು ಉಡುಪಿಗೆ ಕರೆ ತರುತ್ತಿದ್ದಾರೆ. ಇದನ್ನೂ ಓದಿ: ಒಂದೇ ಕುಟುಂಬದ ನಾಲ್ವರ ಕಗ್ಗೊಲೆ ಪ್ರಕರಣ – ಒಬ್ಬಳ ಮೇಲಿನ ದ್ವೇಷಕ್ಕೆ ನಾಲ್ವರು ಬಲಿ!
ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಇಲ್ಲಿಯವರೆಗೂ ಶಂಕಿತನ ಚಹರೆ ಹೋಲುವ 10ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ. ಘಟನೆ ನಡೆದ ದಿನವೇ ಉಡುಪಿ ಎಸ್ಪಿ ಡಾ.ಅರುಣ್ ಸೂಚನೆಯಂತೆ ಪ್ರಕರಣದ ತನಿಖೆಗೆ 5 ತಂಡಗಳನ್ನು ರಚನೆ ಮಾಡಲಾಗಿತ್ತು. ಸಿಸಿಟಿವಿ ದೃಶ್ಯಾವಳಿಗಳ ಬೆನ್ನತ್ತಿರುವ ಪೊಲೀಸರು ಉಡುಪಿ, ಮಂಗಳೂರು, ಶಿವಮೊಗ್ಗ, ಕೇರಳದಲ್ಲಿ ಮಹತ್ವದ ಕಾರ್ಯಾಚರಣೆ ನಡೆಸಿ ಕೃತ್ಯ ಎಸಗಿದ ವ್ಯಕ್ತಿಯ ಚಹರೆ ಹೋಲುವವರನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸರ ಒಂದು ತಂಡ ಕೇರಳದ (Kerala) ಕೊಚ್ಚಿಯಲ್ಲಿ ಓರ್ವ ಶಂಕಿತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ಮಾಡಿದೆ. ಉಡುಪಿ, ಶಿವಮೊಗ್ಗ, ದಾವಣಗೆರೆಯಲ್ಲಿ ಸಂಶಯಾಸ್ಪದ ವ್ಯಕ್ತಿಗಳ ಮೇಲೆ ನಿಗಾವಹಿಸಿ ಚಲನವಲನ ಗಮನಿಸಿ ವಿಚಾರಣೆ ಮಾಡಿದ್ದಾರೆ.
ವಶಕ್ಕೆ ಪಡೆದ ಎಲ್ಲಾ ಶಂಕಿತರ ಪೈಕಿ ಪ್ರವೀಣ್ ಚೌಗಲೆ ಮೇಲೆ ಅನುಮಾನ ಜಾಸ್ತಿ ಇದೆ. ಮೃತಪಟ್ಟ ಹಸೀನಾ ಅವರ ಎರಡನೇ ಪುತ್ರಿಯಾಗಿರುವ ಆಯ್ನಾಝ್ ಮತ್ತು ಚೌಗಲೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರೂ ಹಳೆಯ ಪರಿಚಿತರು ಕೂಡ ಹೌದು ಎಂದು ತಿಳಿದು ಬಂದಿದೆ. ಹತ್ಯೆಯಾದ ಬಳಿಕ ಪ್ರವೀಣ್ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿದ್ದ. ಈ ಕಾರಣಕ್ಕೆ ಆತನ ಮೇಲೆ ಅನುಮಾನ ಜಾಸ್ತಿಯಿದೆ. ಇದನ್ನೂ ಓದಿ: ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಕಗ್ಗೊಲೆ!