– ಎನ್ಐಎ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ
ಚಂಡೀಗಢ: ಹರಿಯಾಣದ ಪಲ್ವಾಲ್ ಜಿಲ್ಲೆಯ ಮಸೀದಿಯೋದರ ನಿರ್ಮಾಣಕ್ಕೆ ಪಾಕಿಸ್ತಾನದಲ್ಲಿರುವ ಉಗ್ರ ಸಂಘಟನೆಯು ಧನ ಸಹಾಯ ನೀಡಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಹೇಳಿದೆ.
ಸೆಪ್ಟೆಂಬರ್ 26 ರಂದು ಎನ್ಐಎ ಲ್ವಾಲ್ ಜಿಲ್ಲೆಯ ಉತ್ತವಾರ್ ಗ್ರಾಮದ ಮಸೀದಿಯ ಮೌಲ್ವಿ ಮೊಹಮ್ಮದ್ ಸಲ್ಮಾನ್ ಜೊತೆಗೆ ದೆಹಲಿಯ ಮೊಹಮ್ಮದ್ ಸಲೀಂ ಮತ್ತು ಸಾಜಿದ್ ಅಬ್ದುಲ್ ನನ್ನು ಬಂಧಿಸಿತ್ತು. ಬಂಧಿತರ ವಿಚಾರಣೆ ವೇಳೆ ಈ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಮಸೀದಿಗೆ ದೇಣಿಗೆಯಾಗಿ ಬಂದ ವ್ಯವಹಾರ ಪುಸ್ತಕವನ್ನು ಎನ್ಐಎ ತಂಡ ಪರಿಶೀಲನೆ ನಡೆಸಿದಾಗ ಈ ಸತ್ಯ ಹೊರ ಬಂದಿದೆ ಎಂದು ಎನ್ಐಎ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಲಷ್ಕರ್-ಇ-ತೊಯ್ಬ ಉಗ್ರ ಸಂಘಟನೆ ಜೊತೆಗೆ ಸಂಪರ್ಕ ಹೊಂದಿದ್ದ ದುಬೈ ಮೂಲದ ವ್ಯಕ್ತಿಯೊಂದಿದೆ ಬಂಧಿತ ಮೌಲ್ವಿ ಮೊಹಮ್ಮದ್ ಸಲ್ಮಾನ್ ಒಡನಾಟ ಇಟ್ಟುಕೊಂಡಿದ್ದ. ಈತ ಫಲಾ-ಇ-ಇನ್ಸನಿಯಾತ್ ಫೌಂಡೇಷನ್ (ಎಫ್ಐಎಫ್) ನಿಂದ ಮಸೀದಿ ನಿರ್ಮಾಣಕ್ಕೆ 70 ಲಕ್ಷ ರೂ. ಪಡೆದಿದ್ದ. ಜೊತೆಗೆ ಮಕ್ಕಳ ಮದುವೆಗೂ ಹಣ ಪಡೆದಿದ್ದಾನೆ ಎನ್ಐಎ ಮೂಲಗಳು ತಿಳಿಸಿವೆ.
ಮೌಲ್ವಿ ಮೊಹಮ್ಮದ್ ಸಲ್ಮಾನ್ ಕೆಲ ವರ್ಷಗಳ ಹಿಂದೆ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಜೊತೆಗೆ ಸಣ್ಣ ಪ್ರಮಾಣದಲ್ಲಿ ಹಾಲಿನ ಉತ್ಪನ್ನಗಳ ವ್ಯಾಪಾರ ನಿರ್ವಹಿಸುತ್ತಿದ್ದ. ಆದರೆ ವ್ಯವಹಾರದಲ್ಲಿ ಭಾರೀ ನಷ್ಟವಾಗಿದ್ದು, ಭಾರತದಿಂದ ಸೌದಿ ಅರೇಬಿಯಾಕ್ಕೆ ಕೆಲಸ ಹುಡುಕಿಕೊಂಡು ಹೋಗಿದ್ದ. ಬಳಿಕ ದುಬೈಗೆ ತೆರಳಿದ್ದ ಆತನಿಗೆ ಪಾಕಿಸ್ತಾನ ಮೂಲದ ಕೆಲವರು ಪರಿಚಯವಾಗಿದ್ದಾರೆ. ಈ ಸಂಪರ್ಕ ಬೆಳೆಸಿಕೊಂಡ ಮೊಹ್ಮದ್ ಸಲ್ಮಾನ್ ಅವರಿಂದ ಹಣವನ್ನು ಭಾರತಕ್ಕೆ ತರುತ್ತಿದ್ದ. ಅಷ್ಟೇ ಅಲ್ಲದೇ ಹವಾಲಾ ವ್ಯವಹಾರದಲ್ಲಿ ತೊಡಗಿಕೊಂಡಿದ್ದ.
ಎನ್ಐಎ ತಂಡ ತನಿಖೆ ಚುರುಕುಗೊಳಿಸಿದ್ದು, ಮಸೀದಿಯ ಮುಖ್ಯಸ್ಥರನ್ನು ವಿಚಾರಣೆ ನಡೆಸಿದೆ. ಮಸೀದಿಗೆ ಬಂದ ದೇಣಿಗೆ ವಿವರಗಳನ್ನು ಪರಿಶೀಲಿಸಿದೆ. ಈ ಕುರಿತು ತನಿಖೆ ನಡೆಸುತ್ತಿದ್ದು, ದೇಣಿಗೆ ಮೂಲದ ಪತ್ತೆಗಾಗಿ ಹಾಗೂ ಏಕೆ ಹಣ ನೀಡಿದ್ದಾರೆ ಎನ್ನುವ ಕುರಿತು ವಿಚಾರಣೆಗೆ ನಡೆಸುತ್ತಿದ್ದೇವೆ ಎಂದು ಎನ್ಐಎ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv