ಬೆಂಗಳೂರು: ಬರೋಬ್ಬರಿ ನಾಲ್ಕು ತಿಂಗಳ ನಂತರ ಸಿಎಂ ಯಡಿಯೂರಪ್ಪ ಮೇಲೆ ದೆಹಲಿ ನಾಯಕರಿಗೆ ಪ್ರೀತಿ ಹುಟ್ಟಿದೆ. ಯಡಿಯೂರಪ್ಪ ಕುರಿತು ತಾತ್ಸಾರದಿಂದಿದ್ದ ಪ್ರಧಾನಿ ಮೋದಿಯವರು ಕೊನೆಗೂ ಯಡಿಯೂರಪ್ಪಗೆ ಜೈ ಎನ್ನುವ ಸಂದರ್ಭ ಬಂದೇಬಿಡ್ತು. ಉಪಚುನಾವಣೆ ಫಲಿತಾಂಶ ಬಂದ ಬೆನ್ನಲ್ಲೇ ಕೇಂದ್ರದ ನಾಯಕರು ಯಡಿಯೂರಪ್ಪಗೆ ಬಹುಪರಾಕ್ ಹಾಡುತ್ತಿದ್ದಾರೆ.
ಇವತ್ತು ಬೆಳ್ಳಂಬೆಳಗ್ಗೆ ಸಿಎಂ ಯಡಿಯೂರಪ್ಪಗೆ ಅಚ್ಚರಿಯೊಂದು ಕಾದಿತ್ತು. ಇವತ್ತು ಬೆಳಗ್ಗೆ ಖುದ್ದು ಪ್ರಧಾನಿ ನರೇಂದ್ರ ಮೋದಿಯವರು ಯಡಿಯೂರಪ್ಪಗೆ ದೂರವಾಣಿ ಕರೆ ಮಾಡಿದ್ರು. ಹತ್ತು ನಿಮಿಷಗಳಿಗೂ ಹೆಚ್ಚು ಕಾಲ ಪ್ರಧಾನಿಗಳು ಯಡಿಯೂರಪ್ಪ ಜೊತೆ ಫೋನಿನಲ್ಲಿ ಮಾತುಕತೆ ನಡೆಸಿದ್ರು. ಮೊದಲಿಗೆ ಉಪಚುನಾವಣೆಯಲ್ಲಿ ಸಿಕ್ಕಿದ ಭರ್ಜರಿ ಗೆಲುವಿಗೆ ಪ್ರಧಾನಿಗಳು ಸಿಎಂ ಯಡಿಯೂರಪ್ಪಗೆ ತುಂಬು ಹೃದಯದ ಅಭಿನಂದನೆ ತಿಳಿಸಿದ್ರು.
ಪ್ರಧಾನಿಗಳು ಯಡಿಯೂರಪ್ಪಗೆ ಉಪಚುನಾವಣೆ ಗೆಲುವಿಗೆ ಮತ್ತೊಮ್ಮೆ ಅಭಿನಂದನೆ ತಿಳಿಸಿದ್ರು. ಬಳಿಕ ಕುಶಲೋಪರಿ ವಿಚಾರಿಸಿ ಆಡಳಿತ, ಅಭಿವೃದ್ಧಿಗೆ ಸಂಬಂಧಿಸಿದಂತೆ ಮಾತು ಆರಂಭಿಸಿದರು. ರಾಜ್ಯ ಸರ್ಕಾರಕ್ಕೆ ಎಲ್ಲ ರೀತಿಯ ಸಹಕಾರ ಕೊಡುವುದಾಗಿ ಸಿಎಂಗೆ ಭರವಸೆ ಪ್ರಧಾನಿ ಮೋದಿ ಭರವಸೆ ಕೊಟ್ಟಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಈ ವೇಳೆ ಉಪಚುನಾವಣೆ ಬಂದಾಗ ಮೊದಲೇ ಕರೆ ಮಾಡಿ ಅಭಿನಂದನೆ ಹೇಳಲು ನಾನಾ ಕೆಲಸ ಕಾರ್ಯಗಳ ಒತ್ತಡಗಳಿದ್ದವು ಎಂದು ಸಿಎಂಗೆ ಪ್ರಧಾನಿಯವರು ಸ್ಪಷ್ಟನೆ ಕೊಟ್ರು. ಜೊತೆಗೆ ರಾಜ್ಯಕ್ಕೆ ಬರಬೇಕಾದ ಜಿಎಸ್ ಟಿ ತೆರಿಗೆಯ ಪಾಲು ಕೊಡುವ ಬಗ್ಗೆಯೂ ಮಹತ್ವದ ಮಾತುಕತೆ ನಡೆಸಿದರು. ಆದಷ್ಟು ಬೇಗ ರಾಜ್ಯದ ಜಿಎಸ್ಟಿ ಪಾಲು ಕೊಡುವುದಾಗಿ ಭರವಸೆ ಕೊಟ್ಟು, ಸಿಎಂ ಅವರಿಂದ ರಾಜ್ಯದ ತೆರಿಗೆ ಸಂಗ್ರಹ, ಅಭಿವೃದ್ಧಿ ಕುರಿತು ಪ್ರಧಾನಿಗಳು ಮಾಹಿತಿ ಪಡೆದರು. ಇನ್ನು ಸಿಎಬಿ ಮತ್ತು ಎನ್ಆರ್ಸಿ ಜಾರಿ ಬಗ್ಗೆಯೂ ಸಿಎಂ ಜೊತೆ ಚರ್ಚೆ ನಡೆಸಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಮಾಹಿತಿ ಪಡೆದರು. ಕೊನೆಯಲ್ಲಿ ಮತ್ತೊಮ್ಮೆ ಸಿಎಂಗೆ ಅಭಿನಂದನೆ ತಿಳಿಸಿ ಪ್ರಧಾನಿ ಮೋದಿಯವರು ಕರೆ ಕಡಿತ ಮಾಡಿದರು. ಇದನ್ನೂ ಓದಿ: ಮೈತ್ರಿ ಸರ್ಕಾರದ ಸ್ಟ್ರಾಟಜಿ ಅನುಸರಿಸಲು ಯಡಿಯೂರಪ್ಪ ಆಲೋಚನೆ
ಬಹಳ ಕಾಲದ ನಂತರ ಪ್ರಧಾನಿ ಮೋದಿಯವರು ಹೀಗೆ ಯಡಿಯೂರಪ್ಪಗೆ ಕರೆ ಮಾಡಿದ್ದಾರೆ. ಇದರಿಂದ ಯಡಿಯೂರಪ್ಪರ ಹುಮ್ಮಸ್ಸು ಇನ್ನಷ್ಟು ಇಮ್ಮಡಿಸಿದೆ. ಉಪಚುನಾವಣೆ ಫಲಿತಾಂಶದ ಬಳಿಕ ಮೋದಿಯವರು ಟ್ವೀಟ್ ಮಾಡುವ ಮೂಲಕ ಯಡಿಯೂರಪ್ಪಗೆ ಅಭಿನಂದನೆ ಹೇಳಿದ್ದರು. ಮೊನ್ನೆ ಸಂಸತ್ ನಲ್ಲಿ ನಡೆದ ಸಂಸದರ ಸಭೆಯಲ್ಲೂ ಯಡಿಯೂರಪ್ಪ ಪರ ಚಪ್ಪಾಳೆ ತಟ್ಟಿಸಿ ಬಹುಪರಾಕ್ ಅಂದಿದ್ದರು. ಬದಲಾದ ಸನ್ನಿವೇಶ ನೋಡುತ್ತಿದ್ದರೆ ಸಧ್ಯಕ್ಕೆ ಸಿಎಂ ಯಡಿಯೂರಪ್ಪರ ಸ್ಥಾನ, ನಾಯಕತ್ವ ಅಬಾಧಿತ ಎನ್ನುವ ವಿಶ್ಲೇಷಣೆ ಕೇಳಿಬಂದಿದೆ.