ದಕ್ಷಿಣ ಭಾರತದ ತಿನಿಸುಗಳ ಪೈಕಿ ಉತ್ತಪ್ಪ ಕೂಡ ಒಂದು. ಉಡುಪಿ, ಕರಾವಳಿಯಲ್ಲಿ ಮುಂಜಾನೆ ಈ ತಿಂಡಿಯನ್ನು ಹೆಚ್ಚಾಗಿ ಮಾಡುತ್ತಾರೆ. ದೋಸೆ ಅಥವಾ ಇಡ್ಲಿ ಹಿಟ್ಟಿನಿಂದ ಮಾಡುವ ಈ ಉತ್ತಪ್ಪ ಬೆಳಗಿನ ಉಪಹಾರಕ್ಕೆ ಉತ್ತಮ ಆಯ್ಕೆಯಾಗಿದೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಸುಲಭವಾಗಿ ಈರುಳ್ಳಿ ಉತ್ತಪ್ಪ ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತೇವೆ. ಹಾಗಿದ್ರೆ ಇದನ್ನು ಯಾವರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ.
ಬೇಕಾಗುವ ಸಾಮಗ್ರಿಗಳು:
ದೋಸೆ ಅಕ್ಕಿ – 2 ಕಪ್
ಉದ್ದಿನ ಬೇಳೆ- ಅರ್ಧ ಕಪ್
ಮೆಂತ್ಯೆ – 1 ಚಮಚ
ಅವಲಕ್ಕಿ – 2 ಮುಷ್ಟಿ
ಉಪ್ಪು – 2 ಚಮಚ
ಸಣ್ಣದಾಗಿ ಹೆಚ್ಚಿದ ಈರುಳ್ಳಿ – 2
ಹಸಿಮೆಣಸಿನಕಾಯಿ – 2 ರಿಂದ 3
ಕರಿಬೇವಿನ ಎಲೆಗಳು – ಸ್ವಲ್ಪ
ಮಾಡುವ ವಿಧಾನ:
* ಮೊದಲಿಗೆ ದೋಸೆ ಅಕ್ಕಿಯನ್ನು ತೊಳೆದು, ಅದಕ್ಕೆ ಕರಿಬೇವು ಮತ್ತು ಮೆಂತ್ಯ ಬೀಜಗಳನ್ನು ಸೇರಿಸಿ 3 ರಿಂದ 4 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ.
* ರುಬ್ಬುಲು 15 ನಿಮಿಷಗಳ ಮೊದಲು ಅವಲಕ್ಕಿ ನೆನೆಸಿಕೊಳ್ಳಿ. ನಂತರ ಎಲ್ಲಾ ಪದಾರ್ಥಗಳನ್ನು ಅಗತ್ಯವಿರುವ ನೀರನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
* ಬಳಿಕ ಈ ಹಿಟ್ಟನ್ನು ರಾತ್ರಿಯಿಡೀ ಹುದುಗಲು ಬಿಡಿ.
* ಮರುದಿನ ಮುಂಜಾನೆ ಉತ್ತಪ್ಪ ಹಿಟ್ಟಿಗೆ ಉಪ್ಪನ್ನು ಸೇರಿಸಿ ಮತ್ತು ಅದನ್ನು ಚೆನ್ನಾಗಿ ಮಿಶ್ರಣ ಮಾಡಿ.
* ಈಗ ದೋಸೆ ತವಾ ಬಿಸಿಗಿಟ್ಟು ಅದರ ಮೇಲೆ ಸ್ವಲ್ಪ ಅಡುಗೆ ಎಣ್ಣೆಯನ್ನು ಸವರಿ. ಬಳಿಕ ತವಾ ಮಧ್ಯದಲ್ಲಿ ಉತ್ತಪ್ಪ ಹಿಟ್ಟನ್ನು ಸುರಿಯಿರಿ. ಇದನ್ನು ದೋಸೆ ರೀತಿ ಹರಡದೇ ಹಾಗೇ ಬೇಯಲು ಬಿಡಿ.
* ಬಳಿಕ ದೋಸೆ ಮೇಲೆ ಸಣ್ಣದಾಗಿ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು ಮತ್ತು ಹಸಿಮೆಣಸನ್ನು ಸಮವಾಗಿ ಹರಡಿ. ಅದನ್ನು 2 ನಿಮಿಷಗಳ ಕಾಲ ಬೇಯಲು ಬಿಡಿ.
* ಈಗ ದೋಸೆಯನ್ನು ತಿರುವಿ ಹಾಕಿ ಇನ್ನೊಂದು ಬದಿಯನ್ನೂ ಬೇಯಿಸಿಕೊಳ್ಳಿ.
* ಎರಡೂ ಕಡೆ ಚೆನ್ನಾಗಿ ಬೆಂದ ಬಳಿಕ ತವಾದಿಂದ ದೋಸೆ ತೆಗೆದು ಪ್ಲೇಟ್ಗೆ ಹಾಕಿ.
* ಈರುಳ್ಳಿ ಉತ್ತಪ್ಪಕ್ಕೆ ಚಟ್ನಿ ಅಥವಾ ಸಾಂಬಾರ್ ಪರ್ಫೆಕ್ಟ್ ಕಾಂಬಿನೇಷನ್.