– ಚಾಮರಾಜನಗರದಲ್ಲಿ 13ಕ್ಕೂ ಹೆಚ್ಚು ಶಾಲೆಗಳಿಗೆ ಬೀಗ
ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ (Chamarajanagara) ಸರ್ಕಾರಿ ಶಾಲೆಗೆ (School) ಶೂನ್ಯ ದಾಖಲೆ ಹಿನ್ನೆಲೆ ಈಗಾಗಲೇ 13ಕ್ಕೂ ಹೆಚ್ಚು ಶಾಲೆಗೆ ಬೀಗ ಬಿದ್ದಿದೆ. ಈ ನಡುವೆ ಜಿಲ್ಲಾದ್ಯಂತ 353 ಕ್ಕೂ ಹೆಚ್ಚು ಮಕ್ಕಳು (Students) ಶಾಲೆಯಿಂದಲೇ ದೂರವುಳಿದಿದ್ದಾರೆಂಬ ಅಚ್ಚರಿ ವಿಚಾರ ಬೆಳಕಿಗೆ ಬಂದಿದೆ.
ಗಡಿ ಜಿಲ್ಲೆ ಚಾಮರಾಜನಗರ ಮೊದಲೇ ಹೇಳಿ ಕೇಳಿ ಶೈಕ್ಷಣಿಕವಾಗಿ ಹಿಂದುಳಿದಿದೆ. ಈ ನಡುವೆ ಸರ್ಕಾರಿ ಶಾಲೆಗೆ ಶೂನ್ಯ ದಾಖಲಾತಿ ಹಿನ್ನೆಲೆ 13 ಶಾಲೆಗಳ ಬಾಗಿಲು ಬಂದ್ ಆಗಿದೆ. ಈ ಮಧ್ಯೆ ಶಿಕ್ಷಣ ಇಲಾಖೆ ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ಒಂದು ಸಮೀಕ್ಷೆ ನಡೆಸಿದೆ. ಸಮೀಕ್ಷೆ ಪ್ರಕಾರ 353ಕ್ಕೂ ಹೆಚ್ಚು ಮಕ್ಕಳು ಈ ಬಾರಿ ಶಾಲೆಯಿಂದಲೇ ದೂರವುಳಿದಿದ್ದಾರೆಂಬ ಅಂಶ ಬೆಳಕಿಗೆ ಬಂದಿದೆ. ಇದರಲ್ಲಿ 159 ಗಂಡು ಮಕ್ಕಳು ಹಾಗೂ 109 ಮಂದಿ ಹೆಣ್ಣು ಮಕ್ಕಳು ಶಾಲೆಯಿಂದ ಡ್ರಾಪ್ ಔಟ್ ಆಗಿರುವುದು ಕಂಡು ಬಂದಿದೆ. ಸರ್ಕಾರ ಮಕ್ಕಳನ್ನು ಶಾಲೆಗೆ ತರಲು ಅನೇಕ ಯೋಜನೆಗಳನ್ನು ನೀಡಿದರೂ ಕೂಡ ಇದು ಗಡಿ ಜಿಲ್ಲೆಯ ಶಾಲೆಗಳಲ್ಲಿ ವರ್ಕ್ ಆಗಿಲ್ಲ.
ಮಕ್ಕಳು ಶಾಲೆಯಿಂದ ದೂರವುಳಿಯಲು ಕಾರಣವೇನು ಅನ್ನೋದು ಕೂಡ ಸಮೀಕ್ಷೆ ವೇಳೆ ಬಹಿರಂಗಗೊಂಡಿದೆ. ಮೊದಲಿಗೆ ಶಾಲೆಗೆ ಮಕ್ಕಳನ್ನು ಕಳಿಸಲು ಪೋಷಕರೇ ನಿರಾಸಕ್ತಿ ಹೊಂದಿದ್ದಾರೆ. ಬಡತನ ಹಿನ್ನೆಲೆ ಮಕ್ಕಳನ್ನು ಉದ್ಯೋಗಕ್ಕೆ ಬಳಸಿಕೊಳ್ಳಲೂ ಕೆಲವರು ಶಾಲೆಗೆ ಮಕ್ಕಳನ್ನು ಕಲಿಸುತ್ತಿಲ್ಲ. 84 ವಿದ್ಯಾರ್ಥಿಗಳು ಶಾಲೆಗೆ ಹೋಗಲೂ ಸ್ವಯಂ ಆಸಕ್ತಿ ಹೊಂದಿಲ್ಲ ಎಂಬುದು ಬೆಳಕಿಗೆ ಬಂದಿವೆ. ಈ ಎಲ್ಲಾ ಅಂಶಗಳನ್ನು ಆಧಾರವಾಗಿಟ್ಟುಕೊಂಡಿರುವ ಶಿಕ್ಷಣ ಇಲಾಖೆ ಇದೀಗ ಮತ್ತೆ ಮಕ್ಕಳನ್ನು ಶಾಲೆಯತ್ತ ಕರೆತರಲು ಪ್ಲ್ಯಾನ್ ಮಾಡಿಕೊಂಡಿದೆ. ಇದನ್ನೂ ಓದಿ: ದೇಶದಲ್ಲಿ ಮತ್ತೆ ಕೊರೊನಾ ಆತಂಕ; ಪಕ್ಕದ ಕೇರಳದಲ್ಲಿ ಜೆಎನ್.1 ಸೋಂಕು ಪತ್ತೆ – ಕರ್ನಾಟಕದಲ್ಲೂ ಹೈ ಅಲರ್ಟ್
ಒಟ್ಟಿನಲ್ಲಿ ಸರ್ವೇ ಮುಗಿದ ಬೆನ್ನಲ್ಲೇ ಶಿಕ್ಷಣ ಇಲಾಖೆಯಿಂದ ಕ್ರಿಯಾ ಯೋಜನೆ ತಯಾರಿಸಲಾಗುತ್ತಿದೆ. ಬಿಳಿಗಿರಿರಂಗನ ಬೆಟ್ಟದಲ್ಲಿ ರೆಸಿಡೆನ್ಸಿಯಲ್ ಬ್ರಿಡ್ಜ್ ಕೋರ್ಸ್ ಆರಂಭಿಸಿದೆ. ಅದರ ಜೊತೆಗೆ ಈ ವರ್ಷವೇ ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ರೀ ಆಡ್ಮಿಷನ್ ಕೊಟ್ಟು ಶಾಲೆಗೆ ಕರೆತರಲು ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಿದೆ. ಇನ್ನಾದರೂ ಸರ್ಕಾರ ಗಡಿ ಜಿಲ್ಲೆಯ ಶಾಲೆಗಳ ಅಭಿವೃದ್ಧಿಗೆ ವಿಶೇಷ ಸವಲತ್ತು ನೀಡಿದರೆ ಮಕ್ಕಳನ್ನು ಶಾಲೆಯತ್ತ ಆಕರ್ಷಿಸಬಹುದಷ್ಟೇ. ಇದನ್ನೂ ಓದಿ: ಕೆಲವು ಹಂದಿ, ನಾಯಿಗಳನ್ನು ವಿಜಯೇಂದ್ರ ಬಿಟ್ಟಿದ್ದಾನೆ: ಯತ್ನಾಳ್ ಆರೋಪ