ಬೆಂಗಳೂರು: ಕರ್ನಾಟಕ-ತಮಿಳುನಾಡು ಗಡಿ ಭಾಗದಲ್ಲಿ ಆನೆಗಳ ಹಾವಳಿ ಮಿತಿಮೀರಿದ್ದು, ಅವುಗಳನ್ನು ನಾಡಿನತ್ತ ಬರದಂತೆ ತಡೆಯಲು ಅರಣ್ಯ ಇಲಾಖೆ ವಿಫಲವಾಗಿದೆ. ಪರಿಣಾಮ ರೈತರು ಕಷ್ಟಪಟ್ಟು ಬೆಳೆದಿದ್ದ ಬೆಳೆಗಳು ಆನೆಗಳ ಪಾಲಾಗುತ್ತಿದೆ.
ತಮಿಳುನಾಡಿನ ಕೆಲಮಂಗಲಂ, ಕರ್ನಾಟಕದ ವಣಕನಹಳ್ಳಿ ಸೋಲುರು ಚೂಡಹಳ್ಳಿ ಗ್ರಾಮದಲ್ಲಿ ತಮಿಳುನಾಡಿನ ಅರಣ್ಯದಿಂದ ಸುಮಾರು 30ಕ್ಕೂ ಹೆಚ್ಚಿನ ಆನೆಗಳ ಹಿಂಡು ರಾಜ್ಯ ಪ್ರವೇಶಿಸಿದೆ. ಅಲ್ಲಿಯೇ ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತರೊಬ್ಬರು ಆನೆಗಳು ಬರುವುದನ್ನು ಕಂಡು ಪಕ್ಕದಲ್ಲೇ ಇದ್ದ ಹೈ ಟೆನ್ಷನ್ ವಿದ್ಯುತ್ ಗೋಪುರ ಏರಿ ಪ್ರಾಣ ಉಳಿಸಿಕೊಂಡಿದ್ದಾರೆ. ಬಳಿಕ ತನ್ನ ಮೊಬೈಲ್ ನಲ್ಲಿ ಆನೆಗಳು ಹಾದು ಹೋಗುವ ದೃಶ್ಯಗಳನ್ನು ಸೆರೆಹಿಡಿದ್ದಾರೆ.
ನವೆಂಬರ್ ನಿಂದ ಮಾರ್ಚ್ ವರೆಗೂ ಆನೆಗಳು ಆಹಾರ ಅರಸಿ ತಮಿಳುನಾಡು-ಕರ್ನಾಟಕ ಅರಣ್ಯ ಪ್ರದೇಶದಲ್ಲಿ ಬೀಡುಬಿಡುತ್ತವೆ. ಅರಣ್ಯದಂಚಿನ ಗ್ರಾಮಗಳತ್ತ ನುಗ್ಗುವ ಆನೆಗಳು ರೈತರು ಬೆಳೆದ ಬೆಳೆಗಳನ್ನು ತಿಂದು ತುಳಿದು ಹಾಳು ಮಾಡುತ್ತವೆ. ಈ ಬಾರಿ ಬರಗಾಲವಿದ್ದು, ಮಳೆಯಿಲ್ಲದೆ ಬೇಳೆ ನಾಶವಾಗಿದೆ. ಉಳಿದ ಬೆಳೆಯನ್ನು ಉಳಿಸಿಕೊಳ್ಳಲು ರೈತರು ಕಷ್ಟಪಡಬೇಕಾದ ಪರಿಸ್ಥಿತಿ ಎದುರಾಗಿದೆ. ಇನ್ನು ಆನೆಗಳನ್ನು ಕಾಡಿನತ್ತ ಓಡಿಸಬೇಕಾದ ಅರಣ್ಯ ಇಲಾಖೆ ಸಿಬ್ಬಂದಿ ಅದೇಕೋ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ ಎಂದು ಕಾಡಂಚಿನ ರೈತ ಮಂಜಪ್ಪ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬರಗಾಲದಿಂದ ನೊಂದಿದ್ದ ರೈತರಿಗೆ ಇದೀಗ ಆನೆಗಳು ಮತ್ತಷ್ಟು ಸಂಕಷ್ಟ ನೀಡುತ್ತಿದ್ದು, ಇನ್ನಾದರೂ ಅರಣ್ಯ ಇಲಾಖೆ ಆನೆಗಳು ಗ್ರಾಮಗಳಿಗೆ ನುಗ್ಗದಂತೆ ತಡೆಯುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv