ರಾಯಚೂರು: ಗುಂಪುಗಳ ಮಧ್ಯೆ ಘರ್ಷಣೆಯಾಗುತ್ತಿದ್ದ ವೇಳೆ ಜಗಳ ಬಿಡಿಸಲು ಬಂದ ಗುಂಪಿನವರೇ ಹಲ್ಲೆ ಮಾಡಿರುವ ಘಟನೆ ರಾಯಚೂರು ತಾಲೂಕಿನ ಗಣಮೂರು ಗ್ರಾಮದಲ್ಲಿ ನಡೆದಿದೆ.
ಘಟನೆಯಿಂದ ಹೊನ್ನಪ್ಪ, ಜಮಲಮ್ಮ ಮತ್ತು ಬಸ್ಸಮ್ಮ ಎಂಬವರು ಸೇರಿದಂತೆ ಸುಮಾರು 15 ಜನರಿಗೆ ದೊಣ್ಣೆ ಮತ್ತು ಬೆತ್ತದಿಂದ ಹಲ್ಲೆ ಮಾಡಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಮಲ್ಲೇಶ, ತಿಪ್ಪಯ್ಯ ಹಾಗೂ ಮಾರೆಪ್ಪ ಸೇರಿ ಇತರರು ಹಲ್ಲೆ ಮಾಡಿ ಪರಾರಿಯಾಗಿದ್ದಾರೆ ಎಮದು ತಿಳಿದುಬಂದಿದೆ.
ಗಣಮೂರು ಗ್ರಾಮದ ಬಸ್ಸಮ್ಮರನ್ನು ಕುರುಬನದೊಡ್ಡಿ ಗೋಪಾಲ ಎಂಬವರಿಗೆ ಮದುವೆ ಮಾಡಿಕೊಡಲಾಗಿತ್ತು. ದೀಪಾವಳಿ ಹಬ್ಬಕ್ಕೆಂದು ಬಸ್ಸಮ್ಮರನ್ನು ಗೋಪಾಲ ಆಕೆಯ ತವರಿಗೆ ಕಳುಹಿಸಿದ್ದನು. ಆದರೆ ಗೋಪಾಲ ರಾತ್ರೋರಾತ್ರಿ ಪಾನಮತ್ತನಾಗಿ ಹೆಂಡತಿಯನ್ನ ಕರೆದುಕೊಂಡು ಹೋಗಲು ಬಂದಿದ್ದಾನೆ. ಪತ್ನಿಯ ತವರು ಮನೆಯವರು ಬೆಳಿಗ್ಗೆ ಕಳುಹಿಸುತ್ತೇವೆ ಎಂದಿದ್ದಾರೆ. ಆದರೆ ಅಷ್ಟಕ್ಕೆ ಸುಮ್ಮನಾಗದ ಪತ್ನಿ ತವರು ಮನೆಯಲ್ಲಿ ರಾದ್ದಾಂತ ಮಾಡಿದ್ದಾನೆ. ಈ ವೇಳೆ ಗುಂಪೊಂದು ಇವರ ಜಗಳವನ್ನು ಬಿಡಿಸಲು ಬಂದಿದೆ. ಹೀಗೆ ಬಂದತಂತಹ ಗುಂಪು ಹಾಗೂ ಮನೆಯವರ ಮಧ್ಯೆ ಮಾತಿನ ಚಕಮಕಿ ನಡೆದು, ಗುಂಪು ಹಲ್ಲೆ ನಡೆಸಿ ಪರಾರಿಯಾಗಿದೆ.
ಸದ್ಯ ಗಾಯಾಳುಗಳನ್ನು ಸಮೀಪದ ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಈ ಘಟನೆ ಸಂಬಂಧ ಯಾಪಲದಿನ್ನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.