ಚಿಕ್ಕಬಳ್ಳಾಪುರ: ನಗರದಲ್ಲಿ ಚಾಟ್ಸ್ ಸೆಂಟರ್ ನಡೆದಿದ್ದ ನೈತಿಕ ಪೊಲೀಸ್ಗಿರಿ (Moral Police) ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಚಿಕ್ಕಬಳ್ಳಾಪುರ (Chikkaballapur) ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಲೆ ಮರೆಸಿಕೊಂಡಿರುವ ಮತ್ತೋರ್ವ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಬಂಧಿತರನ್ನು (Arrest) ನಕ್ಕಲಕುಂಟೆಯ ವಾಹಿದ್ ಹಾಗೂ ಸದ್ದಾಂ ಎಂದು ಗುರುತಿಸಲಾಗಿದೆ. ಪರಾರಿಯಾಗಿರುವ ಮತ್ತೋರ್ವ ಆರೋಪಿ ಇಮ್ರಾನ್ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: ಕೃಷಿ, ಜಲ ಸಂಪನ್ಮೂಲ ಅಭಿವೃದ್ಧಿಯಲ್ಲಿ ದೇಶದಲ್ಲೇ ರಾಯಚೂರಿಗೆ ಫಸ್ಟ್ ರ್ಯಾಂಕ್
ಏನಿದು ಪ್ರಕರಣ?
ಹಿಂದೂ (Hindu) ಯುವಕನ ಜೊತೆ ಮುಸ್ಲಿಂ (Muslim) ಯುವತಿಯೊಬ್ಬಳು ಚಾಟ್ಸ್ ಸೆಂಟರ್ಗೆ ತೆರಳಿದ್ದಳು. ಈ ವೇಳೆ ಮುಸ್ಲಿಂ ಸಮುದಾಯದ ಯುವಕರು ಹಿಂದೂ ಯುವಕನಿಗೆ ಕಪಾಳಮೋಕ್ಷ ಮಾಡಿದ್ದರು. ಚಿಕ್ಕಬಳ್ಳಾಪುರ ನಗರದ ಕಾರ್ಖಾನೆ ಪೇಟೆಯಲ್ಲಿರುವ ಗೋಪಿಕಾ ಚಾಟ್ಸ್ ಸೆಂಟರ್ ಬಳಿ ಈ ಘಟನೆ ನಡೆದಿತ್ತು. ಘಟನೆಯ ವೀಡಿಯೋ ತುಣುಕುಗಳು ಸೋಷಿಯಲ್ ಮಿಡಿಯಾಗಳಲ್ಲಿ ವೈರಲ್ ಆಗಿತ್ತು. ಅಲ್ಲದೆ ಘಟನೆ ಬಹಳಷ್ಟು ಚರ್ಚೆಗೆ ಗ್ರಾಸವಾಗಿತ್ತು.
ನಗರದ ಇಂದಿರಾನಗರದ ಯುವತಿ ಹಾಗೂ ಮೂಲತಃ ಶಿಡ್ಲಘಟ್ಟದ ದಿಬ್ಬೂರಹಳ್ಳಿ ಬಳಿಯ ಹಳ್ಳಿಯೊಂದರ ಯುವಕ, ಇಬ್ಬರೂ ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು ಸ್ನೇಹಿತರಾಗಿದ್ದರು. ಯುವಕ ಎಂಜಿ ರಸ್ತೆಯ ಸರ್ಕಾರಿ ವಸತಿ ನಿಲಯದಲ್ಲಿದ್ದು ವ್ಯಾಸಂಗ ಮಾಡುತ್ತಿದ್ದಾನೆ. ಯುವತಿ ವ್ಯಾಸಂಗದ ಜೊತೆ ಜೊತೆಯಲ್ಲೇ ಯಲಹಂಕ (Yelahanka) ಬಳಿಯ ಮಾಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾಳೆ. ಘಟನೆ ನಡೆದ ದಿನ ಅನಾರೋಗ್ಯದಿಂದ ಕೆಲಸಕ್ಕೆ ರಜೆ ಹಾಕಿ ಚಿಕ್ಕಬಳ್ಳಾಪುರಕ್ಕೆ ವಾಪಾಸ್ಸಾಗಿದ್ದಳು. ಈ ವೇಳೆ ತನ್ನ ಸಹಪಾಠಿ ಬಸ್ ನಿಲ್ದಾಣದ ಬಳಿ ಆಕಸ್ಮಿಕವಾಗಿ ಸಿಕ್ಕ ಕಾರಣ ಆತ ಅಕೆಯನ್ನು ಮಾತನಾಡಿಸಿದ್ದಾನೆ. ಬಳಿಕ ಚಾಟ್ ಸೆಂಟರ್ಗೆ ತೆರಳಿದ್ದರು.
ಈ ವೇಳೆ ಆರೋಪಿಗಳು ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದರು. ಆ ಸಮಯದಲ್ಲಿ ಯುವತಿ ಯುವಕನ ರಕ್ಷಣೆಗೆ ಮುಂದಾಗಿ ಧೈರ್ಯದಿಂದ ಯುವಕರನ್ನ ಪ್ರಶ್ನೆ ಮಾಡಿ ತಿರುಗೇಟು ನೀಡಿದ್ದಳು. ಬಳಿಕ ವಿಷಯ ತಿಳಿದು ಅವರ ಸಮುದಾಯದ ಹಿರಿಯರು ಯುವತಿ ಬಳಿ ಯುವಕನ ವಿಚಾರಣೆ ಸಹ ನಡೆಸಿ, ಆತ ತನ್ನ ಅಣ್ಣ ಇದ್ದ ಹಾಗೆ ಎಂದು ಅಣೆ ಮಾಡಿಸಿದ್ದರು.
ಈ ವಿಷಯ ಪೊಲೀಸರ ಗಮನಕ್ಕೆ ಬಂದ ಮೇಲೆ ಇಬ್ಬರ ಬಳಿ ತೆರಳಿ ಮಾಹಿತಿ ಪಡೆದುಕೊಂಡಿದ್ದರು. ಈಗ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಬಲೂನ್ ಕಟ್ಟಿಕೊಂಡು ಕುಮಾರಧಾರ ನದಿಗೆ ಹಾರಿ ಉದ್ಯಮಿ ಆತ್ಮಹತ್ಯೆ