ಚಿಕ್ಕೋಡಿ: ಕೃಷ್ಣಾ ನದಿ ತೀರದ ಜೊತೆಗೆ ಹಿರಣ್ಯಕೇಶಿ ನದಿ ತೀರದಲ್ಲೂ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ನದಿ ದಡದ ಸಂಕೇಶ್ವರ ಪಟ್ಟಣದ 500 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಸಂಕಷ್ಟದಲ್ಲಿರುವ ಜನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಗೊಳ್ಳುತ್ತಿದ್ದಾರೆ. ಇತ್ತ ಹಿರಣ್ಯಕೇಶಿ ನದಿ ಮಧ್ಯ ಭಾಗದಲ್ಲಿದ್ದ ಮರಗಳಲ್ಲಿ ಸುಮಾರು 25ಕ್ಕೂ ಮಂಗಗಳು ಕಳೆದ 8 ದಿನಗಳಿಂದ ಜಲ ಜಲ ದಿಗ್ಬಂಧನದಲ್ಲಿ ಸಿಲುಕಿದೆ.
ಹಿರಣ್ಯಕೇಶಿ ನದಿ ನೀರು ಉಕ್ಕಿ ಹರಿಯುತ್ತಿರುವ ಪರಿಣಾಮ ನದಿ ಪಾತ್ರದ ಸುಮಾರು 5 ರಿಂದ 6 ಗ್ರಾಮಗಳಲ್ಲಿ ಜನರು ಪ್ರವಾಹದ ಸಮಸ್ಯೆಯನ್ನು ಎದುರಿಸಿದ್ದಾರೆ. ಪ್ರವಾಹದಲ್ಲಿ ಸಿಲುಕಿರುವ ಗ್ರಾಮಸ್ಥರನ್ನ ರಕ್ಷಣೆ ಮಾಡಿ ಸ್ಥಳಾಂತರ ಮಾಡುವ ಕಾರ್ಯವನ್ನು ಜಿಲ್ಲಾಡಳಿತ ಮಾಡುತ್ತಿದೆ. ನದಿ ಪಾತ್ರದ ಸುತ್ತಮುತ್ತಲಿನ ಸಾವಿರಾರು ಎಕರೆ ಕೃಷಿ ಭೂಮಿ ಕೂಡ ಮುಳುಗಡೆಯಾಗಿದ್ದು, ಅಪಾರ ಪ್ರಮಾಣದ ನಷ್ಟ ಎದುರಾಗಿದೆ.
ಪ್ರವಾಹದಿಂದ ಜನರಿಗೆ ಮಾತ್ರವಲ್ಲದೇ ಜಾನುವಾರುಗಳಿಗೂ ಮೇವಿನ ಸಮಸ್ಯೆ ಎದುರಾಗಿದ್ದು, ಮೇವಿಗಾಗಿ ರೈತರು ಹರಸಾಹಸ ಪಡುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣಕ್ಕೆ ನದಿ ನೀರು ನುಗ್ಗಿದೆ. ಪರಿಣಾಮ ವಯೋವೃದ್ಧರು, ಮಕ್ಕಳು, ಮಹಿಳೆಯರು ಸುರಕ್ಷಿತ ಸ್ಥಳಗಳಿಗೆ ತೆರಳಲು ಪರದಾಟ ನಡೆಸಿದ್ದಾರೆ. ಪಟ್ಟಣದಲ್ಲಿ ಸುಮಾರು 200ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ.
ಮಹಾರಾಷ್ಟ್ರದಲ್ಲಿ ಉಂಟಾಗಿರುವ ಭಾರೀ ಮಳೆಗೆ ಕೃಷ್ಣೆ ಉಕ್ಕಿ ಹರಿಯುತ್ತಿರುವ ಪರಿಣಾಮ ಪುಣೆ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ, ಜತ್ತ – ಜಾಂಬೋಟಿ ರಾಜ್ಯ ಹೆದ್ದಾರಿ, ಸಂಕೇಶ್ವರ – ಜೇವರ್ಗಿ ರಾಜ್ಯ ಹೆದ್ದಾರಿಗಳು ಬಂದ್ ಆಗಿದೆ. ಬಾಗಲಕೋಟೆ ಮಹಾರಾಷ್ಟ್ರ ಸಂಪರ್ಕಿಸುವ ರಾಯಭಾಗ ತಾಲೂಕಿನ ಕುಡಚಿ ರಾಜ್ಯ ಹೆದ್ದಾರಿಯ ಬಂದ್ ಆಗಿದೆ. ಅಥಣಿ ತಾಲೂಕಿನ ದರೂರ ಸೇತುವೆ ಕೂಡ ಮುಳುಗಡೆಯಾಗಿದೆ.