ತಿರುವನಂತಪುರಂ: ಚಲಿಸುತ್ತಿದ್ದ ಬಸ್ ಮೇಲೆ ಕೋತಿಗಳು ತೆಂಗಿನಕಾಯಿ ಎಸೆದ ಪರಿಣಾಮ ಮುಂಭಾಗದ ಗಾಜು ಪುಡಿ ಪುಡಿಯಾಗಿದ್ದು, ಪ್ರಯಾಣಿಕರಿಬ್ಬರು ಗಾಯಗೊಂಡಿರುವ ಘಟನೆ ಕೇರಳದ ಇರಿತ್ತಿಯಲ್ಲಿ ನಡೆದಿದೆ.
ಸೆಂಟ್ ಜೂಡ್ ಹೆಸರಿನ ಖಾಸಗಿ ಬಸ್ ಇರಿತ್ತಿ ಮತ್ತು ನೆರುಂಪೊಯಿಲ್ ನಡುವೆ ಸಂಚರಿಸುವಾಗ ಮಾರ್ಗ ಮಧ್ಯೆ ಮಂಗಗಳ ಗುಂಪು ದಾಳಿ ಮಾಡಿದೆ. ರಸ್ತೆ ಪಕ್ಕದ ತೆಂಗಿನಮರದ ಮೇಲೆ ಮಂಗಗಳು ಬೀಡು ಬಿಟ್ಟಿದ್ದ ವೇಳೆ ಬಸ್ ವೇಗವಾಗಿ ಚಲಿಸಿದೆ. ಇದರಿಂದ ಉದ್ರಿಕ್ತಗೊಂಡ ಮಂಗಗಳ ಗುಂಪು ಬಸ್ಸಿನತ್ತ ತೆಂಗಿನಕಾಯಿಗಳನ್ನು ತೂರಿದೆ. ಇದರಿಂದ ಬಸ್ಸಿನ ಗಾಜು ಪುಡಿಪುಡಿಯಾಗಿದೆ. ಇದನ್ನೂ ಓದಿ: ಬಾಲಿವುಡ್ ನನ್ನ ಕಪ್ ಆಫ್ ಟೀ ಅಲ್ಲ: ಧೋನಿ
ಈ ಘಟನೆಯಿಂದ ಬಸ್ ಸೇವೆ ಸುಮಾರು ಅರ್ಧ ದಿನ ಸ್ಥಗಿತಗೊಂಡಿತು. ಬಸ್ ಮಾಲೀಕ ಜಾನ್ಸನ್ ವಿಂಡ್ಶೀಲ್ಡ್ ಬದಲಿಸಲು 17 ಸಾವಿರ ರೂಪಾಯಿ ಆಗಿದೆ. ಇತ್ತ ಮಂಗಗಳು ಮಾಡಿದ ಕೆಲಸದ ಹೊಣೆಯನ್ನು ಹೊರಲು ಅರಣ್ಯ ಇಲಾಖೆ ನಿರಾಕರಿಸಿದೆ.
ಮಂಗಗಳ ನಿರಂತರ ದಾಳಿಯಿಂದಾಗಿ ಈ ಪ್ರದೇಶದ ಮೂಲಕ ಕೇವಲ ಒಂದು ಬಸ್ ಸೇವೆಯನ್ನು ಮಾತ್ರ ನಡೆಸಲಾಗುತ್ತದೆ. ಸ್ಥಳೀಯರು, ಪ್ರಯಾಣಿಕರು ಮತ್ತು ಪಾದಾಚಾರಿಗಳು ಸಹ ದಿನೇ ದಿನೇ ಕೋತಿಗಳ ದಾಳಿಯನ್ನು ಎದುರಿಸುತ್ತಿದ್ದಾರೆ. ಆದರೆ ಅರಣ್ಯ ಇಲಾಖೆ ಈ ಸಮಸ್ಯೆಯನ್ನು ಪರಿಹರಿಸಲು ನಿರ್ಣಾಯಕ ಹೆಜ್ಜೆ ತೆಗೆದುಕೊಂಡಿಲ್ಲ. ಈಗಲಾದರೂ ಕ್ರಮ ತೆಗೆದುಕೊಳ್ಳಿ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಇದನ್ನೂ ಓದಿ: ಕಿಂಗ್ ಖಾನ್ ಮಗನ ಡ್ರಗ್ಸ್ ಪ್ರಕರಣದಲ್ಲಿ ಕನ್ನಡಿಗನ ವಕಾಲತ್ತು