ಬಾಗಲಕೋಟೆ: ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ರೈತರ ಜೊತೆ ಸಂವಾದ ಕಾರ್ಯಕ್ರಮ ನಡೆಸುತ್ತಿದ್ದ ವೇಳೆ ಕೋತಿಗಳು ಎಂಟ್ರಿಕೊಟ್ಟು ಆಹಾರವನ್ನು ಸೇವಿಸಿದ ಪ್ರಸಂಗ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ನಡೆದಿದೆ.
ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಇಂದು ಕೂಡಲಸಂಗಮದ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕೃಷ್ಣಾ ಮೇಲ್ದಂಡೆ ಯೋಜನೆ ವ್ಯಾಪ್ತಿಯ ಸಂತ್ರಸ್ತರ ಭೂಮಿ ಬೆಲೆ ನಿಗದಿಗಾಗಿ ರೈತರ ಜೊತೆ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಕೋತಿಗಳು ರಾಜರೋಷವಾಗಿ ವೇದಿಕೆಯ ಮೇಲೆ ಸಚಿವರಿಗಾಗಿ ಇಟ್ಟಿದ್ದ ಬಿಸ್ಕೆಟ್ ಸಹಿತ ತಿನಿಸುಗಳನ್ನು ತೆಗೆದುಕೊಂಡು ಹೋಗಿವೆ. ಅಷ್ಟೇ ಅಲ್ಲದೇ ಸಭೆಯ ಬ್ಯಾನರ್ ಮೇಲೆಯೂ ಕುಳಿತು ಆಟವಾಡಿವೆ. ಸಭೆಯಲ್ಲಿದ್ದ ಸಿಬ್ಬಂದಿ ಕೋತಿಗಳನ್ನು ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ.
ಸಭೆಯಲ್ಲಿ ಕಾಗೋಡು ತಿಮ್ಮಪ್ಪ ಅಲ್ಲದೇ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ, ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.