ಬೆಂಗಳೂರು: ರಾಮನ ಸನ್ನಿಧಾನದಲ್ಲಿ ಅಂಜನೇಯನ ಪ್ರತಿಷ್ಠಾಪನಾ ಸ್ಥಳದಿಂದ ಕೋತಿ ಕದಲುತ್ತಿಲ್ಲ. ಒಂದು ವಾರದಿಂದ ಕೋತಿ ಹಿಡಿಯಲು ಅರಣ್ಯ ಘಟಕ ಹರಸಾಹಸ ಪಡುತ್ತಿದ್ದು, ಬಲೆ ಹಿಡ್ಕೊಂಡು ಹೋದರೆ ಗುರಾಯಿಸ್ತಾನೆ. ಇಲ್ಲದೇ ಇದ್ದರೆ ಅರಣ್ಯಾಧಿಕಾರಿಗಳ ಜೊತೆಗೆ ಆಟ ಆಡುತ್ತಾನೆ. ಬೆಂಗಳೂರಿನ ಐತಿಹಾಸಿಕ ದೇಗುಲದ ವಿಶೇಷ ಕೋತಿ ಈಗ ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ಬೆಂಗಳೂರಿನ ಹೆಚ್ಬಿಆರ್ ಲೇಔಟ್ನ ಐತಿಹಾಸ ಪ್ರಸಿದ್ಧ ಕೋದಂಡರಾಮ ದೇಗುಲದಲ್ಲೀಗ ಈ ವಿಶಿಷ್ಟ ಕೋತಿಯದ್ದೇ ಕಾರುಬಾರು. ಚುರುಕು ಕಣ್ಣಿನ ಈ ಕೋತಿ ಈ ದೇಗುಲವನ್ನು ಬಿಟ್ಟು ಕದಲುತ್ತಿಲ್ಲ. ವಿಶೇಷ ಎಂದರೆ ಇನ್ನೊಂದು ತಿಂಗಳಲ್ಲಿ ಬೆಂಗಳೂರಿನ ಅತೀ ದೊಡ್ಡ ಅಂಜನೇಯನ ಮೂರ್ತಿ ಪ್ರತಿಷ್ಟಾಪನೆ ಮಾಡಬೇಕಾದ ಜಾಗದಲ್ಲಿಯೇ ಈ ಕೋತಿ ಕಳೆದೊಂದು ವಾರದಿಂದ ಇದೆ. ಈಗಾಗಲೇ ತರ್ಲೆ ಮಾಡಿರುವ ಊರಿನ ನಾಲ್ಕು ಜನರಿಗೆ ಕೋತಿ ಕಚ್ಚಿರೋದ್ರಿಂದ ಬಿಬಿಎಂಪಿ ಅರಣ್ಯ ಘಟಕದವರು ಸ್ಥಳಕ್ಕೆ ಹೋಗಿ ಕೋತಿಯನ್ನ ಹಿಡಿಯೋಣ ಎಂದುಕೊಂಡರೆ ಅಧಿಕಾರಿಗಳೇ ತಬ್ಬಿಬ್ಬು ಆಗಿದ್ದಾರೆ.
ಅಧಿಕಾರಿಗಳನ್ನು ಕಂಡರೆ ಈ ಕೋತಿ ಅವರ ಹತ್ತಿರ ಹೋಗಿ ಕೈಯನ್ನು ಹಿಡಿದು ಅದೇನೋ ಮಾಡುತ್ತಿರುತ್ತೆ. ಅವರ ತಲೆಯ ಮೇಲೆ ಹತ್ತಿ ಕೂತು ತುಂಟಾಟ ಮಾಡೋದಕ್ಕೆ ಶುರುಮಾಡಿದೆ. ಕೆಲ ಊರಿನ ಹಿರಿಯ ಜೀವಿಗಳನ್ನು ಕಂಡರೆ ಪ್ರೀತಿಸೋ ಈ ಕೋತಿ ಅವರ ತೊಡೆಯೇರಿ ಕೂತು ಮುದ್ದು ಮಾಡಿಸಿಕೊಳ್ಳುತ್ತೆ. ಆದರೆ ಹಿಡಿಯೋಕೆ ಬಲೆ ತೆಗೆದುಕೊಂಡು ಬಂದರೆ ಗುರಾಯಿಸಿಕೊಂಡು ಹೋಗಿ ಚಕ್ ಎಂದು ನೆಗೆದು ತಪ್ಪಿಸಿಕೊಳ್ಳುತ್ತೆ.
ಇದು ಕರ್ನಾಟಕದ ಕೋತಿ ಅಲ್ಲ ಮಹಾರಾಷ್ಟ್ರದ ಕೋತಿ. ನಾವು ಯಾವ ಕೋತಿಯನ್ನು ಹಿಡಿಯೋದಕ್ಕೂ ಈ ಪರಿ ಕಷ್ಟ ಪಟ್ಟಿಲ್ಲ ಅಂತಾರೆ ಅರಣ್ಯ ಘಟಕದವರು. ಆದರೆ ಜನ ಮಾತ್ರ ಇದು ಅಂಜನೇಯ ಸ್ವಾಮಿನೇ ಎಂದು ಖುಷಿಪಡುತ್ತಿದ್ದಾರೆ. ಜನರಿಗೆ ಕಚ್ಚಿರೋದ್ರಿಂದ ಒಂದು ವಾರದಿಂದ ಸತತವಾಗಿ ಅರಣ್ಯಾಧಿಕಾರಿಗಳು ಕೋತಿ ಹಿಡಿಯೋಕೆ ಹೋಗಿ ನಿರಾಸೆಯಿಂದ ವಾಪಸ್ಸಾಗಿದ್ದಾರೆ. ದೇಗುಲದ ಅಂಗಳದಲ್ಲಿ ಓಡಾಡೋ ಕೋತಿ ಜನರ ಪಾಲಿಗೆ ವಿಸ್ಮಯವಾಗಿ ಕಾಣುತ್ತಿದೆ.