ಎರಡು ಸಾವಿರಕ್ಕಾಗಿ ಮುಗಿಬಿದ್ದ ಜನ- ನೂಕುನುಗ್ಗಲು

Public TV
1 Min Read
mng 2000

ಮಂಗಳೂರು: ಎರಡು ಸಾವಿರ ರೂಪಾಯಿ ಸಿಗುತ್ತದೆ ಎಂದು ಸಾಮಾಜಿಕ ಅಂತರವನ್ನೂ ಮರೆತು ಜನ ಮುಗಿಬಿದ್ದಿದ್ದು, ನೂಕುನುಗ್ಗಲು ಸಂಭವಿಸಿದೆ.

ಮಂಗಳೂರು ನಗರದ ಕೂಳೂರಿನಲ್ಲಿ ಘಟನೆ ನಡೆದಿದ್ದು, ಶ್ರೀ ದೇವಿ ಪ್ರಸಾದ್ ಖಾಸಗಿ ಕಟ್ಟಡದಲ್ಲಿ ಕೂಲಿ ಕಾರ್ಮಿಕರ ಮಾಹಿತಿ ಪಡೆದು ಹಣ ಅಕೌಂಟ್‍ಗೆ ಹಾಕಲಾಗುತ್ತದೆ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ. ಇದನ್ನು ಕೇಳಿದ ಜನತೆ ಸಾಮಾಜಿಕ ಅಂತರವನ್ನು ಮರೆದು ಸುಮಾರು 600-750 ಜನರ ಗುಂಪು ಸಾಲಿನಲ್ಲಿ ಸೇರಿತ್ತು. ಯಾಕೆ ನಿಂತಿದ್ದೀರಿ ಎಂದು ಕೇಳಿದರೆ ‘ನಮ್ಮ ಬ್ಯಾಂಕ್ ಖಾತೆಗೆ 2000 ರೂ. ಹಣ ಬರುತ್ತದೆ’ ಎಂದು ನಿಂತಿದ್ದೇವೆ ಎಂದು ಉತ್ತರಿಸಿದ್ದಾರೆ. ಯಾರು ಹೇಳಿದ್ದು ಎಂದರೆ, ಯಾರಿಂದಲೂ ನಿಖರವಾದ ಉತ್ತರ ಇಲ್ಲ.

vlcsnap 2020 04 15 22h46m46s98

ಮಧ್ಯಾಹ್ನ 11.30 ರಿಂದ 3.30ರ ವರೆಗೆ ಈ ಜನಸಂದಣಿ ನಿಂತಿದ್ದು, ಎಲ್ಲರೂ ಬ್ಯಾಂಕ್ ಪಾಸ್ ಪುಸ್ತಕ, ಆಧಾರ್ ಕಾರ್ಡ್ ಹಿಡಿದುಕೊಂಡು ಸರತಿಯಲ್ಲಿ ನಿಂತಿದ್ದರು. ಮಾಹಿತಿ ಪಡೆಯುವವರ ಬಳಿ ಯಾಕಾಗಿ ಕೂಲಿ ಕಾರ್ಮಿಕರ ಬ್ಯಾಂಕ್ ಖಾತೆ ಸಂಖ್ಯೆ ಪಡೆಯಲಾಗುತ್ತಿದೆ ಎಂದು ಕೇಳಿದರೆ, ನಮಗೆ ಡಿಸಿ ಕಚೇರಿಯಿಂದ ಮಾಹಿತಿ ಪಡೆಯಲು ಹೇಳಿದ್ದಾರೆ. ಆದರೆ ಯಾರಿಗೂ 2000 ರೂ. ಬ್ಯಾಂಕ್ ಖಾತೆಗೆ ಹಾಕುತ್ತಿಲ್ಲ ಎಂದು ತಿಳಿಸಿದ್ದಾರೆ.

ಬಳಿಕ ಸ್ವಲ್ಪ ಹೊತ್ತಿನಲ್ಲಿ ಕಾರ್ಮಿಕ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಅವರಿಗೂ ಕೂಲಿ ಕಾರ್ಮಿಕರು ಮುತ್ತಿಗೆ ಹಾಕಿದ್ದಾರೆ. ಹೀಗಾಗಿ ಅವರೂ ನಿಲ್ಲದೆ ಕಾರು ಚಲಾಯಿಸಿ ಹಾಗೇ ಹೊರಟಿದ್ದಾರೆ. ಬಳಿಕ ಕಾರ್ಮಿಕರು ಮಾಹಿತಿ ಪಡೆದಿದ್ದು, ಬೈಕ್ ಏರಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. 2000 ರೂ. ಸಿಗುತ್ತದೆ ಎಂದು ಬಂದವರು ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಮನೆ ದಾರಿ ಹಿಡಿದಿದ್ದಾರೆ.

vlcsnap 2020 04 15 22h46m19s95

ಈ ಬಗ್ಗೆ ಪೊಲೀಸ್ ಇಲಾಖೆಗೆ, ಸ್ಥಳೀಯ ಕಾರ್ಪೊರೇಟರ್, ಮಹಾನಗರ ಪಾಲಿಕೆಯ ಆಯುಕ್ತರು ಯಾರಿಗೂ ಸರಿಯಾದ ಮಾಹಿತಿ ಇಲ್ಲ. ಆದರೆ ಲಾಕ್‍ಡೌನ್ ಹಾಗೂ ಸಾಮಾಜಿಕ ಅಂತರ ಎರಡೂ ಉಲ್ಲಂಘನೆಯಾಗಿವೆ. ಜಿಲ್ಲಾಡಳಿತ ಬೆಳಗ್ಗೆ 7 ಗಂಟೆಯಿಂದ 12 ರವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಮನೆಯಿಂದ ಹೊರ ಬರಬಹುದು ಎಂದು ಆದೇಶಿಸಿದೆ. ಆದರೆ ಸರ್ಕಾರಿ ಅಧಿಕಾರಿಗಳಿಂದಲೇ ಈ ಕಾನೂನು ಉಲ್ಲಂಘನೆ ಆಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *