ಕಲಬುರಗಿ: ಷೇರು ಮಾರುಕಟ್ಟೆ ಹೆಸರಿನಲ್ಲಿ ಹಣ ಡಬಲ್ ಮಾಡಿ ಕೊಡುವುದಾಗಿ ಜನರಿಗೆ 30 ಕೋಟಿ ರೂ.ಗಳಿಗೂ ಹೆಚ್ಚಿನ ಹಣವನ್ನು ವಂಚಿಸಿರುವ ಪ್ರಕರಣ ಕಲಬುರಗಿಯ (Kalaburagi) ರೋಜಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಉತ್ಕರ್ಷ ಹಾಗೂ ಸಾವಿತ್ರಿ ದಂಪತಿ ಗಾಂಧಿನಗರದ ಬಳಿ ಬಿ.ಎಲ್ ಕಾಂಪ್ಲೆಕ್ಸ್ನಲ್ಲಿ ಟ್ರೇಡಿಂಗ್ ಕಂಪನಿ ನಡೆಸುತ್ತಿದ್ದರು. ಯುವಕ ಯುವತಿಯರನ್ನು ಗುರಿಯಾಗಿಸಿಕೊಂಡು ದಂಪತಿ ಸುಮಾರು 500ಕ್ಕೂ ಹೆಚ್ಚು ಜನರಿಗೆ (Money Fraud Case) ವಂಚಿಸಿದ್ದಾರೆ. ಕೆಲವರಿಂದ 25 ಲಕ್ಷ ರೂ.ನಿಂದ 1 ಕೋಟಿ ರೂ. ವರೆಗೂ ಹೂಡಿಕೆ ಮಾಡಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ. ಇದನ್ನೂ ಓದಿ: 1 ಲಕ್ಷಕ್ಕೂ ಅಧಿಕ ಮೌಲ್ಯದ ನಶೆ ಏರಿಸುವ ಡ್ರಗ್ಸ್, ಮಾತ್ರೆ ಜಪ್ತಿ
ದಂಪತಿಗೆ ವಿಜಯಸಿಂಗ್ ಹಜಾರೆ ಹಾಗೂ ಸುಧಾ ಎಂಬವರು ಸಹಾಯ ಮಾಡಿದ್ದಾರೆ ಎಂದು ಜನ ಆರೋಪಿಸಿದ್ದಾರೆ. ಈ ಸಂಬಂಧ ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರು ದಾಖಲಾಗುತ್ತಿದ್ದಂತೆ ದಂಪತಿ ಅಪಾರ್ಟ್ಮೆಂಟ್ನಿಂದ ಸುನಿಲ್ ಎಂಬವರ ಕಾರಿನಲ್ಲಿ ಪರಾರಿಯಾಗಿದ್ದಾರೆ. ಪ್ರಕರಣ ಸಂಬಂಧ ಸುಧಾ ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಜುವೆಲ್ಲರಿ ಮಳಿಗೆ ಮೇಲೆ ಐಟಿ ದಾಳಿ – 26 ಕೋಟಿ ನಗದು ಜಪ್ತಿ