ಕೊಪ್ಪಳ: ಐತಿಹಾಸಿಕ ಹಿನ್ನೆಲೆ ಹೊಂದಿರುವ ಕೊಪ್ಪಳದ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತದಲ್ಲಿರುವ ಆಂಜನೇಯಸ್ವಾಮಿ ದೇವಸ್ಥಾನದ ಹುಂಡಿ ಹಣ ಎಣಿಕೆಯನ್ನು ಇಂದು ಮಾಡಲಾಗಿದ್ದು, 17 ಲಕ್ಷ ರೂ. ಸಂಗ್ರಹವಾಗಿದೆ.
ಧಾರ್ಮಿಕ ದತ್ತಿ ಇಲಾಖೆ ಹಾಗೂ ತಾಲೂಕು ಆಡಳಿತದ ವತಿಯಿಂದ ಹುಂಡಿ ಹಣ ಎಣಿಕೆಯನ್ನು ಮಾಡಲಾಗಿದೆ. ಒಟ್ಟು 31 ದಿನಗಳ ಅವಧಿಯಲ್ಲಿ ಹುಂಡಿಯಲ್ಲಿ ಒಟ್ಟು 17,98,935 ರೂ. ಸಂಗ್ರಹವಾಗಿದೆ. ಅಷ್ಟೇ ಅಲ್ಲದೆ ಹುಂಡಿಯಲ್ಲಿ 5 ವಿದೇಶಿ ನಾಣ್ಯಗಳು ಸಹ ದೊರೆತಿವೆ.
ಈ ಸಂರ್ಭದಲ್ಲಿ ತಹಶೀಲ್ದಾರರಾದ ವಿ.ಎಚ್.ಹೊರಪೇಟೆ ಮಾತನಾಡಿ, ಜಿಲ್ಲಾಡಳಿತದ ನಿರ್ದೇಶನದಂತೆ ಕೋವಿಡ್ ನಿಯಮಗಳನ್ನು ಪಾಲನೆ ಮಾಡಿದ್ದೇವೆ. ಕಾನೂನಿನ ಅಡಿಯಲ್ಲಿ ಸಿಸಿ ಕ್ಯಾಮೆರಾ ಚಿತ್ರೀಕರಣ ಮಾಡಿ, ತಾಲೂಕು ಆಡಳಿತದ ಸಿಬ್ಬಂದಿ ಬಳಕೆ ಮಾಡಿಕೊಂಡು ಹುಂಡಿ ಹಣ ಎಣಿಕೆಯನ್ನು ಮಾಡಲಾಗಿದೆ ಎಂದರು. ಇದನ್ನೂ ಓದಿ: 3 ಕೋಟಿ ವೆಚ್ಚದ ರಸ್ತೆ ನಿರ್ಮಾಣ, 1 ಕೋಟಿಯ ಯುಜಿಡಿ ಕಾಮಗಾರಿಗೆ ಶೀಘ್ರ ಚಾಲನೆ: ಜಗದೀಶ್ ಶೆಟ್ಟರ್
31 ದಿನಗಳ ಅವಧಿಯಲ್ಲಿ 17 ಲಕ್ಷ ರೂ. ಹಣ ಸಂಗ್ರಹವಾಗಿದೆ. ಕಳೆದ ಬಾರಿ ನವೆಂಬರ್ 30 ರಂದು 23 ಲಕ್ಷ ರೂ. ಹುಂಡಿಯಲ್ಲಿ ಸಂಗ್ರಹವಾಗಿತ್ತು ಎಂದು ಹೇಳಿದರು.
ಶಿರಸ್ತೇದಾರರಾದ ಅನಂತಜೋಷಿ, ರವಿಕುಮಾರ್, ಕಂದಾಯ ನಿರೀಕ್ಷಕರಾದ ಮಂಜುನಾಥ್ ಹಿರೇಮಠ, ಕಂದಾಯ ಇಲಾಖೆ ಸಿಬ್ಬಂದಿಗಳಾದ ಶ್ವೇತಾ, ಶ್ರೀಕಂಠ, ಅನಿತಾ, ಇಂದಿರಾ, ಅನ್ನಪೂರ್ಣ,ಪೂಜಾ, ಕಾವ್ಯ, ಸುರೇಶ್, ಅಭಿಷೇಕ್ ಹಾಗೂ ಇತರರು ಇದ್ದರು. ಇದನ್ನೂ ಓದಿ: ಇಂದು ವರ್ಷದ ಕೊನೆಯ ದಿನ, ರಾಷ್ಟ್ರ ಲಸಿಕೆಯ ಅಭಾವ ಎದುರಿಸುತ್ತಿದೆ: ರಾಹುಲ್ ಗಾಂಧಿ