ಮೈಸೂರು: ಬೆಂಗಳೂರಿನಲ್ಲಿ ನಡೆದಿದ್ದ ಐಎಂಎ ವಂಚನೆ ಮಾದರಿಯಲ್ಲೇ ಮೈಸೂರಿನಲ್ಲೂ ಗ್ರಾಹಕರಿಂದ ಹಣ ಕಟ್ಟಿಸಿಕೊಂಡು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಪಿಗ್ಮಿ ಕಟ್ಟಿಸಿಕೊಂಡು ಪಿಗ್ಮಿ ಮೆಚ್ಯುರಿಟಿ ಆದ ಬಳಿಕವೂ ಹಣ ಹಿಂದಿರುಗಿಸದೆ ನೂರಾರು ಜನರಿಗೆ ಮೋಸ ಮಾಡಲಾಗಿದೆ.
ಮೈಸೂರಿನ ಸುಭಾಷ್ನಗರದಲ್ಲಿರುವ ಮಹಾವಿಷ್ಣು ವಿವಿದೋದ್ದೇಶ ಸಹಕಾರ ಸಂಘದಲ್ಲಿ ಪಿಗ್ಮಿ ಹೆಸರಿನಲ್ಲಿ ನೂರಾರು ಗ್ರಾಹಕರಿಂದ ಹಣ ಕಟ್ಟಿಸಿಕೊಂಡು ದುಪ್ಪಟ್ಟು ಹಣ ಕೊಡ್ತೀವಿ ಅಂತ ಆಸೆ ತೋರಿಸಿದ್ದರು. ಆದರೆ ಪಿಗ್ಮಿ ಮೆಚ್ಯೂರಿಟಿ ಆದ್ಮೇಲೂ ಹಣವನ್ನು ಗ್ರಾಹಕರಿಗೆ ನೀಡದೇ ಇವತ್ತು, ನಾಳೆ ಎಂದು ಆಟ ಆಡಿಸ್ತಿದ್ದಾರೆ. ಇದರಿಂದ ಕೋಪಗೊಂಡ ಗ್ರಾಹಕರು ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಕ್ಷಾಂತರ ರೂಪಾಯಿ ಕಟ್ಟಿರೋ ಗ್ರಾಹಕರು ತಮ್ಮ ಹಣ ಮರುಪಾವತಿಸುವಂತೆ ಪಟ್ಟು ಹಿಡಿದು ಕುಳಿತಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬ್ರ್ಯಾಂಚ್ ಹೊಂದಿರೋ ಈ ಸಂಸ್ಥೆ ಕಳೆದ 3 ತಿಂಗಳಿಂದ ಹಣ ನೀಡದೆ ಸತಾಯಿಸುತ್ತಿದೆ. ಸದ್ಯ ಸಂಸ್ಥೆಯ ವ್ಯವಸ್ಥಾಪಕನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಮೋಸ ಹೋಗುವ ಜನರು ಇರುವವರೆಗೂ ಹೀಗೆ ಮೋಸ ಮಾಡೋರ ಸಂಖ್ಯೆಯೂ ದಿನೇ ದಿನೇ ಹೆಚ್ಚಾಗುತ್ತಲೇ ಇರುತ್ತೆ. ಮುಂದಾದರು ಜನರು ಈ ರೀತಿ ಪಿಗ್ಮಿ, ಹಣ ದುಪ್ಪಟ್ಟು ಮಾಡಿಕೊಳ್ಳುವ ಆಸೆ, ಆಮೀಷಕ್ಕೆ ಮೋಸ ಹೋಗದೆ ಎಚ್ಚರವಹಿಸಬೇಕಿದೆ.